ಆರ್ ವಿ ಇನ್ಸಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಬೆಂಗಳೂರು ಜಯನಗರ ಆರ್ ವಿ ಸಂಸ್ಥೆಯ ಶಾಶ್ವತಿ ಸಭಾಂಗಣದಲ್ಲಿ ಪ್ರಥಮ ವರ್ಷದ ತರಗತಿಗಳ ಉದ್ಘಾಟನೆ ಮತ್ತು ಆರ್ ವಿ ಲಾ ಜರ್ನಲ್ ಬಿಡುಗಡೆ ಸಮಾರಂಭವನ್ನು 21 ನವೆಂಬರ್ 2022,ಸೋಮವಾರದಂದು ನೆರವೇರಿಸಿತು.

ಪ್ರಥಮ ವರ್ಷದ ತರಗತಿಗಳ ಉದ್ಘಾಟನೆಯನ್ನು ಮುಖ್ಯ ಅತಿಥಿ ಕರ್ನಾಟಕ ಉಚ್ಚ ನ್ಯಾಯಾಲಯದ ಸನ್ಮಾನ್ಯ ನ್ಯಾಯಾಧೀಶರಾದ ಶ್ರೀನಿವಾಸ ಹರೀಶ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ ಡಾ. ಚಿದಾನಂದ ಎಸ್.ಪಾಟೀಲ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಮತ್ತು ಡಾ. ಸಾಯಿರಾಂ ಭಟ್ ಹಿರಿಯ ಪ್ರಾಧ್ಯಾಪಕರು, ರಾಷ್ಟ್ರೀಯ ಕಾನೂನು ಶಾಲೆ ಇಂಡಿಯಾ ವಿಶ್ವವಿದ್ಯಾಲಯ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ರಾದ ಡಾ. ಎಂ ಪಿ ಶ್ಯಾಮ್ ವಹಿಸಿದರು.
ಆರ್ ವಿ ಇನ್ಸಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಪ್ರಾಂಶುಪಾಲರಾದ ಪ್ರೊ. ಡಾ. ಅಂಜಿನಾ ರೆಡ್ಡಿ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿ ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ಆರ್ ವಿ ಲಾ ಜರ್ನಲ್ ಸಂಪುಟ ಹಾಗೂ ಆರ್ ವಿ ನ್ಯೂಸ್ ಲೆಟರ್ ಅನ್ನು ಬಿಡುಗಡೆ ಮಾಡಲಾಯಿತು. ಉಚ್ಛ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಕಾನೂನು ಕಲಿಕೆಯ ವಿವಿಧ ಹಂತಗಳನ್ನು, ಇಂದು ಕಾನೂನಿನ ಸಹಾಯಹಸ್ತವನ್ನು ಸಮಾಜದ ದುರ್ಬಲ ವರ್ಗದ ಜನರಿಗೆ ತಲುಪಿಸಬೇಕು ಎಂದು ಕರೆ ನೀಡಿದರು. ನೂತನ ಕಾನೂನು ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ, ಪದವಿಯ ಅಭ್ಯಾಸದ ಜೊತೆಗೆ ನ್ಯಾಯಾಲಯದ ಕಲಾಪಗಳನ್ನು ಗಮನಿಸಬೇಕು, ಹಿರಿಯ ನ್ಯಾಯವಾದಿಗಳ ಮಾರ್ಗದರ್ಶನ, ತರಬೇತಿ ಪಡೆಯಬೇಕು. ಸ್ವಯಂ ಸೇವಾ ಸಂಸ್ಥೆಗಳಲ್ಲಿ ತರಬೇತಿ ಪಡೆಯಬೇಕು, ಆಗಲೇ ಶ್ರೇಷ್ಠ ವಕೀಲರಾಗಲು ಸಾಧ್ಯ ಎಂದು ತಿಳಿಸಿದರು. ಸಂವಿಧಾನದ ಮಹತ್ವತೆಯನ್ನು ನ್ಯಾಯಮೂರ್ತಿಗಳು ವಿವರಿಸುತ್ತಾ ಸಂವಿಧಾನದ ಮೂಲ ಭೂತ ಹಕ್ಕುಗಳಲ್ಲದೆ ಸಾಂವಿಧಾನಿಕ ಕರ್ತವ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಲು ಕರೆ ನೀಡಿದರು. ನ್ಯಾಯಾಲಯಗಳಲ್ಲಿ ಕನ್ನಡ ವ್ಯವಹಾರದ ಭಾಷೆಯನ್ನಾಗಿ ಉಪಯೋಗಿಸಬೇಕು ಇದರಿಂದ ನ್ಯಾಯಾಲಯಕ್ಕೆ ವ್ಯಾಜ್ಯ ನಿರ್ಣಯಕ್ಕಾಗಿ ಬರುತ್ತಿರುವ ಗ್ರಾಮೀಣ ಜನರಿಗೆ ನ್ಯಾಯಾಲಯದ ಕಲಾಪಗಳು ಸುಲಭವಾಗಿ ಅರ್ಥವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಡಾ. ಚಿದಾನಂದ ಪಾಟೀಲ್ ಹಾಗೂ ಡಾ. ಸಾಯಿರಾಂ ಭಟ್ ಕಾನೂನು ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನ ಕೌಶಲ್ಯ ಅಭಿವೃದ್ಧಿ, ಸಂವಹನ ಕೌಶಲ್ಯ, ಅಗತ್ಯವಾದ ಕಾನೂನಿನ ಅರಿವು ಜ್ಞಾನವನ್ನು ಪಡೆಯಲು ಅಳವಡಿಸಿಕೊಳ್ಳಬೇಕಾದ ಸಾಧ್ಯತೆಗಳ ಬಗ್ಗೆ ಪ್ರಶೋತ್ತರ ಸಂವಾದ ನಡೆಸಿಕೊಟ್ಟರು. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷರಾದ ಡಾ. ಎಂ ಪಿ ಶ್ಯಾಮ್ ರವರು ತಮ್ಮ ಅಧ್ಯಕ್ಷೀಯ ಭಾಷಣ ದಲ್ಲಿ ಕಾನೂನೂ ಶಿಕ್ಷಣ ಮತ್ತು ತರಬೇತಿ ಸಮಾಜದ ಸಂಪೂರ್ಣ ಒಳಿತಿಗೆ ಕಾರಣವಾಗಬೇಕು, ನೂತನ ಕಾನೂನು ವಿದ್ಯಾರ್ಥಿಗಳಿಗೆ ಆರ್ ವಿ ಇನ್ಸಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಸಂಸ್ಥೆಯಲ್ಲಿರುವ ಸೌಲಭ್ಯ ಸೌಕರ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.
City Today News – 9341997936