ದಿನಾಂಕ 22/12/2022 ರಂದು ಗೌರವಾನ್ವಿತ ರಾಷ್ಟ್ರಪತಿಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಮ್ಮ ನಿಯೋಗವು ನೀಡಿರುವ ಮನವಿ ಪತ್ರದ ಪ್ರತಿಯನ್ನು ಲಗತ್ತಿಸಿದೆ. ನಾಡಿನ ಎಸ್ಸಿ/ಎಸ್ಟಿ ಜನಾಂಗಗಳ ಭೂಮಿಯ ಹಕ್ಕನ್ನು ರಕ್ಷಿಸಲು ರಾಷ್ಟ್ರಪತಿಗಳು ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಲು ಕೋರಿದೆ.

2017ರ ಅಕ್ಟೋಬರ್ ತಿಂಗಳಿನಿಂದ ನಾಡಿನ ಸಾವಿರಾರು ಎಸ್ಸಿ/ಎಸ್ಟಿ ಸಮುದಾಯಗಳ ಭೂಮಿಯ ಹಕ್ಕನ್ನು ರಕ್ಷಿಸಲು ನಮ್ಮ ಒಕ್ಕೂಟವು ಸಿದ್ಧಪಡಿಸಿರುವ ಪಿ.ಟಿ.ಸಿ.ಎಲ್. ಕಾಯ್ದೆಯ (1978 ) ಮತ್ತು ನಿಯಮಾವಳಿ (1979) ಗಳಿಗೆ ಸಮಗ್ರ ತಿದ್ದುಪಡಿಯ ಮಸೂದೆಯ ಕರಡ ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಈ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವಂತೆ ಹಲವು ಹಂತಗಳ ಹೋರಾಟಗಳನ್ನೂ ಸಹ ಹಮ್ಮಿಕೊಂಡು ಬಂದಿದ್ದೇವೆ. ಎಸ್ಸಿ/ಎಸ್ಟಿ ಶಾಸಕರ ಸಮಿತಿ ಮತ್ತು ಕರ್ನಾಟಕ ಅನುಸೂಚಿತ ಜಾತಿ / ಪಂಗಡಗಳ ಆಯೋಗವೂ ಸಹ ಸಭೆಗಳನ್ನು ನಡೆಸಿ ಕರಡನ್ನು ಅಂಗೀಕರಿಸುವಂತೆ ರಾಜ್ಯಸರ್ಕಾರಕ್ಕೆ ಶಿಫಾರಸ್ಸು ಮಾಡಿವೆ. ಮಾನ್ಯ ಮುಖ್ಯಮಂತ್ರಿಗಳು ಮಸೂದೆಯನ್ನು ಅಂಗೀಕರಿಸುವುದಾಗಿ ತಾತ್ವಿಕ ಒಪ್ಪಿಗೆ ನೀಡಿದ ಮೇಲೆ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ವರಿಷ್ಠಾಧಿಕಾರಿಗಳು ಮಸೂದೆಯ ಕರಡಿನಲ್ಲಿರುವ ತಿದ್ದುಪಡಿ ಅಂಶಗಳ ಬಗ್ಗೆ ಸಭೆಗಳನ್ನು ನಡೆಸಿ ಸಚಿವ ಸಂಪುಟ ಸಭೆಗೆ ಮಂಡಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಈ ಕಡತವು ಕಂದಾಯ ಸಚಿವರ ಕಛೇರಿಯಿಂದ ಸಚಿವ ಸಂಪುಟ ಟಿಪ್ಪಣಿಗೆ ಹೋಗದೆ ಕಳೆದ ಎರಡು ವರ್ಷದಿಂದ ಅವರ ಕಛೇರಿಯಲ್ಲೇ ಧೂಳು ಹಿಡಿದು ಕೂತಿದೆ. ಕಂದಾಯ ಸಚಿವರು ಯಾರ ಒತ್ತಡಕ್ಕೆ ಮಣಿದು ದಲಿತರ ಭೂಮಿಯ ಹಕ್ಕಿಗೆ ವಿಳಂಬ ಧೋರಣೆ ತೋರಿದ್ದಾರೆಂಬುದು ಗೊತ್ತಾಗುತ್ತಿಲ್ಲ. ಇಂದಿನ ಅಧಿವೇಶನದಲ್ಲಿ ಮಸೂದೆಯ ಕರಡನ್ನು ಅಂಗೀಕರಿಸದಿದ್ದರೆ ಇಂದಿನ ಸರ್ಕಾರದಿಂದ ದಲಿತರ ಭೂಮಿಯ ಹಕ್ಕಿನ ನಿರಾಕರಣೆಯೆ ಎಂದು ಭಾವಿಸಿ ಮುಂದಿನ ಹೋರಾಟಕ್ಕೆ ಕರೆ ನೀಡಲು ನಿರ್ಧರಿಸುವುದಕ್ಕಾಗಿ ಇಂದಿನ ಚಳಿಗಾಲದ ಅಧಿವೇಶನದಲ್ಲಿ ಹಕ್ಕೊತ್ತಾಯಗಳ ಪತ್ರವನ್ನು ಸಲ್ಲಿಸಲು “ಸುವರ್ಣ ಸೌಧ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 26/12/2022 ರ ಬೆಳಿಗ್ಗೆ 11-30ಕ್ಕೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಛೇರಿಯಿಂದ ಸುವರ್ಣ ಸೌಧಕ್ಕೆ ಪ್ರತಿಭಟನಾ ಮೆರವಣಿಗೆ ಏರ್ಪಡಿಸಿದೆ. ರಾಜ್ಯಾದದ್ಯಂತ ಇರುವ ಪಿ.ಟಿ.ಸಿ.ಎಲ್ ಕಾಯ್ದೆ ಬಾಧಿತರೆಲ್ಲರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗಿ ಕೋರುತ್ತೇವೆ.
ಗ್ರಾಮ ಸಹಾಯಕರನ್ನು ಖಾಯಂಗೊಳಿಸಲು ಒತ್ತಾಯ: ನಾಡಿನಾದ್ಯಂತ ನೂರಾರು ವರ್ಷಗಳಿಂದ ತೋಟಿ, ತಳವಾರಿಕೆ, ನೀರಗಂಟಿ, ಮುಂತಾದ ಬಿಟ್ಟಿ ಚಾಕರಿಗಳನ್ನು ಮಾಡಿಕೊಂಡು ಬಂದಿರುವ ಸುಮಾರು 12 ಸಾವಿರ ಎಸ್ಸಿ/ಎಸ್ಟಿ ಜನಾಂಗಗಳ ಗ್ರಾಮ ಸಹಾಯಕರನ್ನು ಖಾಯಂಗೊಳಿಸುವ ಪ್ರಸ್ತಾಪವನ್ನು ಈ ಹಿಂದೆ ಕಂದಾಯ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ಮಂಡಿಸಿದ್ದಾಗ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಅದನ್ನು ತಿರಸ್ಕರಿಸಿ ದಲಿತ ದ್ರೋಹಿ ಎಂದೆನಿಸಿಕೊಂಡರು. ಇದೇ ಕಾರಣಕ್ಕಾಗಿ ಶ್ರೀನಿವಾಸ ಪ್ರಸಾದರವರು ರಾಜೀನಾಮೆ ನೀಡಿದ್ದನ್ನು ನಾವು ಯಾರೂ ಮರೆಯುವಂತಿಲ್ಲ. ಹೀಗೆ ಅಂದು ನೆನೆಗುದಿಗೆ ಬಿದ್ದ ಈ ಪ್ರಸ್ತಾಪವು ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಸರ್ಕಾರಗಳಿಂದಲೂ ಸಹ ನಿರ್ಲಕ್ಷ್ಯತೆಗೆ ಒಳಗಾಯಿತು. ಈ ನಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದ್ದ ಇಂದಿನ ಮುಖ್ಯಮಂತ್ರಿಗಳು ಸಹಾ ಇದುವರೆಗೆ ಖಾಯಂ ಆದೇಶವನ್ನು ಹೊರಡಿಸಲಾಗಿಲ್ಲ. ಇಂದಿನ “ಸುವರ್ಣ ಸೌಧ ಚಲೋ” ಪ್ರತಿಭಟನೆಯಲ್ಲಿ ಸಲ್ಲಿಸಲಾಗುವುದು. ಈ ಪೂರಕವಾದ ಮನವಿ ಪತ್ರ
ಎಸ್ಸಿ/ಎಸ್ಟಿ ಅನುದಾನ ದುರ್ಬಳಕೆ – ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಆಗ್ರಹ:ದಲಿತ ಸಂಘಟನೆಗಳ ಒಕ್ಕೂಟದಿಂದ ನಿರಂತರ ಹೋರಾಟದಿಂದಾಗಿ 2013 ರ ಸುವರ್ಣ ಸೌಧದ ಅಧಿವೇಶನದಲ್ಲಿ ಎಸ್ಸಿ/ಎಸ್ಟಿ ಜನಾಂಗಗಗಳ ಅಭ್ಯುದಯಕ್ಕಾಗಿ ವಿಶೇಷ ಘಟಕ ಯೋಜನೆ (ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ)ಯ ಕ್ರಾಂತಿಕಾರಿ ಯೋಜನೆಯು ಜಾರಿಗೆ ಬಂದಿತು. ಆದರೆ ಅದರ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದಲ್ಲಿನ ವಿವಿಧ ಇಲಾಖಾಧಿಕಾರಿಗಳ ದಲಿತ ವಿರೋಧಿ ಧೋರಣೆಯಿಂದ ಅನುದಾನ ಹಣದ ದುರ್ಬಳಕೆ ಮತ್ತು ಅನುದಾನದ ಹಣ ಸಂಪೂರ್ಣವಾಗಿ ದಲಿತರ ಅಭ್ಯುದಯಕ್ಕಾಗಿ ಖರ್ಚಾಗದೆ ಇರುವ ಅಂಕಿ ಅಂಶಗಳು ದಲಿತರ ಬಗ್ಗೆ ಅಧಿಕಾರಿ ವರ್ಗ ವಹಿಸಿರುವ ಅನಾಧಾರಣೆ ಧೋರಣೆಯನ್ನು ಎತ್ತಿ ಹಿಡಿದಿದೆ. ಸರ್ಕಾರವು ಪ್ರಸ್ತುತ ಈ ಸಾಲಿನಲ್ಲಿ ಒಟ್ಟು ರೂ. 29,165,81 ಕೋಟಿ ಹಂಚಿಕೆ ಮಾಡಿದೆ. ಈ ಮೊತ್ತದಲ್ಲಿ ಅಕ್ಟೋಬರ್ ಅಂತ್ಯದವರೆಗೆ ರೂ 13,702,45 ಕೋಟಿ ಮಾತ್ರ ಬಿಡುಗಡೆಯಾಗಿದೆ. ಬಿಡುಗಡೆಯಾಗಿರುವ ಈ ಮೊತ್ತದಲ್ಲಿ ರೂ 4,303,82 (34% ರಷ್ಟು) ಮಾತ್ರ ಖರ್ಚಾಗಿದೆ. ವೆಚ್ಚವಾದ ಮೊತ್ತವನ್ನು ಹಂಚಿಕೆಯಾದ ಮೊತ್ತಕ್ಕೆ ಪರಿಗಣಿಸಿದರೆ ಅದರ ಅರ್ಧದಷ್ಟು ಇಲ್ಲ. ಕಾಯ್ದೆಯ ಸೆಕ್ಷನ್ 1ಡಿ ರದ್ದಾಗುವ ಮೂಲಕ ಈ ಅನುದಾನದ ಸದ್ಬಳಕೆ ಆಗಬೇಕೆಂದು ಈ ಮೂಲಕ ಒತ್ತಾಯಿಸುವ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಅಧಿಕಾರಿಗಳ ಈ ಕರ್ತವ್ಯ ಲೋಪವು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಬೇಕೆಂದು ಆಗ್ರಹಿಸಿ “ಸುವರ್ಣ ಸೌಧ ಚಲೋ” ಕಾರ್ಯಕ್ರಮವನ್ನು ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಡಾ.ಎಂ.ವೆಂಕಟಸ್ವಾಮಿ ಅಧ್ಯಕ್ಷರು,ದಲಿತ ಸಂಘಟನೆಗಳ ಒಕ್ಕೂಟ , ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News – 9341997936