
ಮಾರ್ಚಿ 4, 2019, ಕೊಯಮತ್ತೂರು: ಭಾರತದ ರಾಷ್ಟ್ರಪತಿಗಳಾದ ಶ್ರೀ. ರಾಮನಾಥ್ ಕೋವಿಂದ್-ರವರು ಲಕ್ಷಾಂತರ ಜನ ಸೇರಿದ್ದ ಈಶ ಯೋಗ ಕೇಂದ್ರದಲ್ಲಿನ ಮಹಾಶಿವರಾತ್ರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಈ ವರ್ಷ ಈಶ ತನ್ನ 25 ನೇ ಮಹಾಶಿವರಾತ್ರಿಯನ್ನು ಆದಿಯೋಗಿಯ ಸಮ್ಮುಖದಲ್ಲಿ ರಾತ್ರಿಯಿಡೀ ನಡೆದ ಕಣ್ಮನ ಸೆಳೆಯುವ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಆಚರಿಸಿತು. ಉತ್ಸವವು ಸಂಜೆ 6 ಕ್ಕೆ ಆರಂಭವಾಗಿ ಬೆಳಿಗ್ಗೆ 6 ಕ್ಕೆ ಮುಕ್ತಾಯವಾಯಿತು. ಈ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಮುಖ್ಯ ಅತಿಥಿಗಳಾಗಿದ್ದರು.

ಈಶ ಫೌಂಡೇಶನ್ನಿನ ಸಂಸ್ಥಾಪಕರಾದ ಸದ್ಗುರುಗಳು ರಾಷ್ಟ್ರಪತಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ, “ಸನ್ಮಾನ್ಯ ರಾಷ್ಟ್ರಪತಿಗಳು ಈಶದ 25 ನೇ ಮಹಾಶಿವರಾತ್ರಿಯಲ್ಲಿ ನಮ್ಮೊಂದಿಗೆ ಉಪಸ್ಥಿತರಿರುವುದು ನಮಗೆ ಗೌರವ ಮತ್ತು ಸುಯೋಗದ ವಿಷಯ.” ಎಂದರು. ಸದ್ಗುರುಗಳು ಎಲ್ಲಾ ರಾಜ್ಯಗಳ ರಾಜ್ಯಪಾಲರು, ಮಂತ್ರಿಗಳು, ಗಣ್ಯರು ಮತ್ತು ಅಲ್ಲಿ ಉಪಸ್ಥಿತರಿದ್ದ ಲಕ್ಷಾಂತರ ಜನರನ್ನೂ ಸ್ವಾಗತಿಸಿದರು.
ರಾಷ್ಟ್ರಪತಿಗಳಿಗೆ ಸದ್ಗುರು ಅವರು ಈಶ ಯೋಗ ಕೇಂದ್ರದ ಹಲವು ಮುಖ್ಯ ಸ್ಥಳಗಳ ಸಂದರ್ಶನ ಮಾಡಿಸಲು ಕರೆದುಕೊಂಡು ಹೋದರು. ಧ್ಯಾನಲಿಂಗ ಆಲಯದಲ್ಲಿ ಸದ್ಗುರುಗಳು ನಡೆಸಿಕೊಟ್ಟ ಪಂಚಭೂತಗಳನ್ನು ಶುದ್ಧೀಕರಿಸುವ ಪಂಚಭೂತ ಆರಾಧನೆಯಲ್ಲಿ ರಾಷ್ಟ್ರಪತಿಗಳು ಭಾಗವಹಿಸಿದರು. ರಾಷ್ಟ್ರಪತಿಗಳು ಲಿಂಗ ಭೈರವಿ ಆಲಯಕ್ಕೂ ಭೇಟಿ ನೀಡಿದರು.

ರಾಷ್ಟ್ರಪತಿಗಳು ಆದಿಯೋಗಿಯ ಬಳಿ ಬಂದಾಗ ಸ್ಥಳದಲ್ಲಿ ನೆರೆದಿದ್ದ ಲಕ್ಷಾಂತರ ಜನರು ಅವರಿಗೆ ಉತ್ಸಾಹಭರಿತ ಸ್ವಾಗತವನ್ನು ನೀಡಿದರು. ತದ ನಂತರ ಅವರು ದಶಲಕ್ಷ ಯೋಗ ವೀರರ ಮೂಲಕ ವಿಶ್ವದಾದ್ಯಂತ ಯೋಗದ ಹರಡುವಿಕೆಯನ್ನು ಸಂಕೇತಿಸಲು ಮಹಾಯೋಗ ಯಜ್ಞವನ್ನು ಬೆಳಗಿದರು. ರಾಷ್ಟ್ರಗೀತೆಯನ್ನು ಹಾಡಿದ ನಂತರ, ಸಸಿಗಳನ್ನು ನೆಡುವ ಮೂಲಕ ರಾಷ್ಟ್ರಪತಿಗಳು ಮತ್ತು ಸದ್ಗುರುಗಳು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವಾರ್ಪಣೆ ಸಲ್ಲಿಸಿದರು. ಆದಿಯೋಗಿಯ ಸನ್ನಿಧಿಯಲ್ಲಿ ದೇವಿಯ ಉತ್ಸವ ಮೂರ್ತಿಗೆ ಆರತಿ ಬೆಳಗಲಾಯಿತು.
ರಾಷ್ಟ್ರಪತಿಗಳು “ಆದಿಯೋಗಿ ದಿವ್ಯ ದರ್ಶನಮ್” ಎಂಬ ಧ್ವನಿ ಮತ್ತು ಬೆಳಕಿನ ಲೇಸರ್ ಪ್ರದರ್ಶನವನ್ನು ಉದ್ಘಾಟಿಸಿದರು. ಇದು ಮಾನವರು ತಮ್ಮ ಪರಮ ಸ್ವರೂಪವನ್ನು ಪಡೆಯಲು 112 ವಿಧಾನಗಳನ್ನು ಪ್ರತಿಪಾದಿಸಿದ ಆದಿಯೋಗಿಯನ್ನು ಕುರಿತಾದ ಒಂದು ನಿರೂಪಣೆಯಾಗಿದೆ. ದಿವ್ಯ ದರ್ಶನಮ್ ಲೇಸರ್ ಪ್ರದರ್ಶನವು ಆದಿಯೋಗಿಯನ್ನು ನೋಡ ಬರುವವರಿಗೊಂದು ನಿಯತವಾದ ಆಕರ್ಷಣೆಯಾಗಲಿದೆ.
ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ, “ಇತರರ ಸೇವೆಯಲ್ಲಿ ತೊಡಗಿ ಬಾಳುವುದೇ ನಿಜವಾದ ಬಾಳು” ಎಂಬುದು ಶಿವನ ಸಂದೇಶವೆಂದು ಹೇಳಿ, “ಆದಿಯೋಗಿಯ ಭವ್ಯ 112-ಅಡಿ ಪ್ರತಿಮೆಯ ಸಮ್ಮುಖದಲ್ಲಿ ನಿಮ್ಮೊಂದಿಗೆ ಇಲ್ಲಿ ಇರುವುದು ನನಗೆ ಬಹಳ ಸಂತೋಷವನ್ನು ತಂದಿದೆ.” ಎಂದೂ ಹೇಳಿದರು. ಅಪಾರ ಸಂಖ್ಯೆಯಲ್ಲಿ ಯುವಜನರು ಯೋಗವನ್ನು ತಮ್ಮ ಜೀವನದಲ್ಲಿ ಒಳಗೂಡಿಸಿಕೊಂಡಿರುವುದನ್ನು ನೋಡಿ ಬಹಳ ಸಂತಸವಾಗಿದೆ ಎಂದರು.
ಆದಿಯೋಗಿ ಮತ್ತು ಆದಿಗುರುವಾದ ಶಿವನಿಗೆ ನಮನಗಳನ್ನು ಸಲ್ಲಿಸುವ ಮಹಾ ಆರತಿಯನ್ನು ಬೆಳಗಲಾಯಿತು. ಮಹಾಶಿವರಾತ್ರಿಯನ್ನು ಶಿವನ ರಾತ್ರಿಯೆಂದು ಹೇಳಲಾಗುತ್ತದೆ – ಅನೇಕ ಸಹಸ್ರಮಾನಗಳ ಧ್ಯಾನದ ನಂತರ ಆದಿಯೋಗಿಯು ಸಂಪೂರ್ಣವಾಗಿ ಅಚಲನಾದ ರಾತ್ರಿಯಿದು. ಭಾರತದಲ್ಲಿನ ಎಲ್ಲಾ ಉತ್ಸವಾಚರಣೆಗಳಲ್ಲಿ ಮಹಾಶಿವರಾತ್ರಿಯನ್ನು ಆಧ್ಯಾತ್ಮಿಕವಾಗಿ ಅತ್ಯಂತ ಶುಭಪ್ರದವೆಂದು ಪರಿಗಣಿಸಲಾಗಿದೆ.
ಅಜೆರ್ಬೈಜಾನಿನ ಡ್ರಮ್ಮರ್ಸ್ ಮತ್ತು ಸೌಂಡ್ಸ್ ಆಫ್ ಈಶ ತಂಡವನ್ನೊಳಗೊಂಡಂತೆ ಹಲವಾರು ಶಾಸ್ತ್ರೀಯ ನೃತ್ಯಗಾರರು ಮತ್ತು ಜಾನಪದ ಕಲಾವಿದರು ರಾತ್ರಿಯಿಡೀ ಸಂಗೀತ ಮತ್ತು ನೃತ್ಯ ಪ್ರಸ್ತುತಿಗಳನ್ನು ಪ್ರದರ್ಶಿಸಿದರು. ಉತ್ಸಾಹಭರಿತ ಮತ್ತು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವಿನಲ್ಲಿ ಸದ್ಗುರುಗಳು ಪ್ರವಚನಗಳನ್ನು ನೀಡಿದರು ಮತ್ತು ಧ್ಯಾನ ಪ್ರಕ್ರಿಯೆಗಳು ನಡೆದವು. ಸದ್ಗುರುಗಳ ನೇತೃತ್ವದಲ್ಲಿ ನಡೆದ ಬಹು ನಿರೀಕ್ಷಿತ ಮಧ್ಯರಾತ್ರಿಯ ಧ್ಯಾನ ಕ್ರಿಯೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಂಡರು.
ಮಹಾಶಿವರಾತ್ರಿಯ ಸಮಯದಲ್ಲಿ ಈಶ ಯೋಗ ಕೇಂದ್ರಕ್ಕೆ ಬಂದಿರುವ ಲಕ್ಷಾಂತರ ಭಕ್ತರಿಗೆ ಮಹಾ ಅನ್ನದಾನವನ್ನು ಮಾಡಲಾಯಿತು.

ಅಂದು ಏರ್ಪಡುವ ಗ್ರಹಗಳ ಸ್ಥಾನಗಳು ಅಪಾರ ಆಧ್ಯಾತ್ಮಿಕ ಲಾಭಗಳನ್ನು ನೀಡುವ ಕಾರಣದಿಂದಾಗಿ ಮಹಾಶಿವರಾತ್ರಿಯು ಮಹತ್ವಪೂರ್ಣವಾಗಿದೆ. ಈ ರಾತ್ರಿಯಂದು, ಭೂಮಿಯ ಉತ್ತರ ಗೋಳಾರ್ಧದಲ್ಲಿ ಮನುಷ್ಯರಲ್ಲಿ ಜೀವಶಕ್ತಿಯ ನೈಸರ್ಗಿಕ ಉತ್ಕರ್ಷ ಉಂಟಾಗುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಮನುಷ್ಯರನ್ನು ಅವರ ಆಧ್ಯಾತ್ಮಿಕ ಉತ್ತುಂಗದೆಡೆಗೆ ತಳ್ಳುತ್ತಿರುತ್ತದೆ. ಆದ್ದರಿಂದ ಈ ನೈಸರ್ಗಿಕ ಉತ್ಕರ್ಷದ ಲಾಭವನ್ನು ಪಡೆಯಲು ಬೆನ್ನುಮೂಳೆಯನ್ನು ನೇರವಾಗಿರಿಸಿ ಎಚ್ಚರವಾಗಿರುವುದು ಮುಖ್ಯವೆಂದು ಪರಿಗಣಿಸಲಾಗಿದೆ. ಈ ರಾತ್ರಿಯಲ್ಲಿ ಉಂಟಾಗುವ ಶಕ್ತಿಯ ಉತ್ಕರ್ಷವು ಯಾವುದೇ ನಂಬಿಕೆಯ ಕಟ್ಟುಪಾಡು ಅಥವಾ ಮತಗಳ ಸಿದ್ಧಾಂತಗಳಿಗೆ ಒಳಪಟ್ಟಿಲ್ಲ. ಆದ್ದರಿಂದ ಮಹಾಶಿವರಾತ್ರಿಯು ಎಲ್ಲರಿಗೂ, ವಿಶೇಷವಾಗಿ ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರಿಗೆ, ಸಾರ್ವತ್ರಿಕವಾಗಿ ಮಹತ್ವಪೂರ್ಣವಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು ರುದ್ರಾಕ್ಷ ಮಣಿ ಮತ್ತು ಸರ್ಪ ಸೂತ್ರವನ್ನು ಪ್ರಸಾದ ರೂಪದಲ್ಲಿ ಪಡೆದರು. ಕಳೆದ ವರ್ಷದಲ್ಲಿ ಆದಿಯೋಗಿಯನ್ನು ಅಲಂಕರಿಸಿದ ಒಂದು ಲಕ್ಷದ ಎಂಟು ರುದ್ರಾಕ್ಷ ಮಣಿಗಳನ್ನು ಪ್ರಸಾದವಾಗಿ ವಿತರಿಸಲಾಯಿತು. ಸರ್ಪ ಸೂತ್ರವು ಎಡಗೈ ಉಂಗುರ ಬೆರಳಲ್ಲಿ ಧರಿಸುವಂತಹ, ಸ್ಥಿರತೆ ಹಾಗೂ ಸೌಖ್ಯವನ್ನು ಉಂಟುಮಾಡುವಲ್ಲಿ ಬೆಂಬಲಿಸುವ ಪವಿತ್ರೀಕರಿಸಿದ ತಾಮ್ರದ ಉಂಗುರವಾಗಿದೆ.
ಸದ್ಗುರುಗಳು ತಮ್ಮ ಮಹಾಶಿವರಾತ್ರಿಯ ಸಂದೇಶದಲ್ಲಿ, “ಶಿವನ ಈ ಮಹಾರಾತ್ರಿಯು ನಿಮಗೆ ಜಾಗೃತಿಯ ರಾತ್ರಿಯಾಗಲಿ.” ಎಂದು ಹಾರೈಸಿದರು.
City Today News
(citytoday.media)
9341997936
