ವಿಜಯ ಬ್ಯಾಂಕನ್ನು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಕರಣ ಮಾಡುವ ಮೂಲಕ ಅದರ ಅಸ್ತಿತ್ವವನ್ನೇ ಕಿತ್ತು ಹಾಕಿತ್ತು – ಬಾಳಪ್ಪ ಶೆಟ್ಟಿ

ವಿಜಯಾ ಬ್ಯಾಂಕ್ ವಿಲೀನ ವಿರೋಧಿಸಿ ಮಂಗಳೂರಿನಲ್ಲಿ ಕರಾಳ ದಿನ ಆಚರಣೆ


ಬೆಂಗಳೂರು, ಏಪ್ರಿಲ್ 9, 2019:

ವಿಜಯ ಬ್ಯಾಂಕ್ ವಿಲೀನ ಸಂಬಂಧಿಸಿದಂತೆ ಕೆಲವು ನಾಯಕರು ಸತ್ಯಕ್ಕೆ ದೂರವಾದ ಹೇಳಿಕೆ ನೀಡುವ ಮೂಲಕ ಜನತೆಯನ್ನು ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ವಾಸ್ತವವಾಗಿ ಅವರಿಗೆ ಬ್ಯಾಂಕ್ ಬಗ್ಗೆ ಯಾವುದೇ ಅಭಿಮಾನವಿಲ್ಲ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ತೃಪ್ತಿಪಡಿಸಲು ಕೆಲವು ನಾಯಕರು ಹೇಳಿಕೆ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ವಿಜಯ ಬ್ಯಾಂಕ್ ವಿಲೀನ ವಿಚಾರವಾಗಿ ರಾಜಕೀಯ ಬೇಡ. ವಿಜಯ ಬ್ಯಾಂಕ್ ರಾಷ್ಟ್ರೀಕರಣವಾದಾಗ ವಿರೋಧಿಸದ ಕಾಂಗ್ರೆಸ್ ನಾಯಕರು ಈಗ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ಸಂಚಾಲಕ ಬಾಳಪ್ಪ ಶೆಟ್ಟಿ ಆರೋಪಿಸಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಆರಂಭಿಸಿತ್ತು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಅದೇ ಸಂದರ್ಭ ವಿಜಯ ಬ್ಯಾಂಕ್ ವಿಲೀನದ ಪ್ರಸ್ತಾವನೆ ನಡೆದಿತ್ತು. ಕರಾವಳಿಯ ಕಾಂಗ್ರೆಸ್‌ ನಾಯಕರಾದ ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ ಆಗ ಕೇಂದ್ರದಲ್ಲಿ ಸಚಿವರಾಗಿದ್ದರು. ಈ ನಾಯಕರು ವಿಲೀನ ಪ್ರಕ್ರಿಯೆ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

ವಿಜಯ ಬ್ಯಾಂಕ್ ಕರಾವಳಿಯ ಹೆಮ್ಮೆಯ ಪ್ರತೀಕವಾಗಿತ್ತು. ಇಂತಹ ವಿಜಯ ಬ್ಯಾಂಕನ್ನು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಕರಣ ಮಾಡುವ ಮೂಲಕ ಅದರ ಅಸ್ತಿತ್ವವನ್ನೇ ಕಿತ್ತು ಹಾಕಿತ್ತು. ವಿಜಯಬ್ಯಾಂಕ್ ಯೂನಿಯನ್ ಮಾಜಿ ನಾಯಕರೆಂದು ಈಗ ಕರೆಸಿಕೊಳ್ಳುವವರು ಆಗ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ಅವರು ಚಕಾರ ಎತ್ತಲಿಲ್ಲ. ವಿಜಯ ಬ್ಯಾಂಕ್ ರಾಷ್ಟ್ರೀಕರಣವಾದ ದಿನವೇ ಕರಾವಳಿಯಿಂದ ದೂರವಾಗಿದೆ. ಆಗ ಮಾತನಾಡದ ನಾಯಕರು ಈಗ ಸ್ವಂತ ಲಾಭಕ್ಕಾಗಿ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ವಿಜಯ ಬ್ಯಾಂಕಿನ ಅಭಿವೃದ್ಧಿಯ ರೂವಾರಿ ಮೂಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರನ್ನು ನಗರದ ಲೈಟ್ ಹೌಸ್ ಹಿಲ್ ರಸ್ತೆಗೆ ಇಡಲು ಮಂಗಳೂರು ಮಹಾ ನಗರ ಪಾಲಿಕೆ ನಿರ್ಣಯ ಕೈಗೊಂಡಿತ್ತು. ರಾಜ್ಯಸರ್ಕಾರ ಕೂಡ ಇದಕ್ಕೆ ಅಧಿಕೃತ ಅನುಮತಿ ನೀಡಿತ್ತು. ಆದರೆ ಆಗಿನ ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೊ ಸರ್ಕಾರದ ಮೇಲೆ ಒತ್ತಡ ಹೇರಿ ಇದಕ್ಕೆ ರಾತ್ರೋರಾತ್ರಿ ತಡೆಯಾಜ್ಞೆ ತಂದಿದ್ದರು. ಸುಂದರ ರಾಮ ಶೆಟ್ಟಿ ಅವರ ಹೆಸರಿಟ್ಟರೆ ಕೋಮು ಗಲಭೆ ನಡೆಯಲಿದೆ ಎಂದು ಲಿಖಿತವಾಗಿ ತಿಳಿಸಿದ್ದರು.

ಸುಂದರರಾಮ ಶೆಟ್ಟಿ ಅವರಂತಹ ಮಹಾನ್ ನಾಯಕರಿಗೆ ಅವಮಾನವಾದಾಗ ಮಾತನಾಡದ ಈ ನಾಯಕರಿಗೆ ಈಗ ವಿಲೀನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ವಿವಾದ ಬಗೆಹರಿಸಲು ಸತ್ಯ ಶೋಧನಾಸಮಿತಿ ನೇಮಿಸಿದ ಆಗಿನ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಯಾವುದೇ ಕ್ರಮ ಕೈಗೊಳ್ಳದೆ ಸುಂದರ ರಾಮ ಶೆಟ್ಟಿ ಅವರ ಅಭಿಮಾನಿಗಳನ್ನು ವಂಚಿಸಿದ್ದರು. ಈ ನಾಯಕರಿಗೆ ಕಾಂಗ್ರೆಸ್‌ನವನ್ನು ಪ್ರಶ್ನಿಸಲು ಧೈರ್ಯವಿಲ್ಲ. ಬದಲಾಗಿ ಹಾದಿ ತಪ್ಪಿಸುವ ಹೇಳಿಕೆ ನೀಡುವ ಮೂಲಕ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ಮುಂತಾದವರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರಚೋದಿಸಿಪ್ರತಿಭಟನೆ ನಡೆಸಿದ್ದರು. ಬಳಿಕ ಕೆಲವು ವಿಜಯಬ್ಯಾಂಕ್ ವಿರೋಧಿಗಳು ಪತ್ರಿಕಾಗೋಷ್ಠಿ ನಡೆಸಿ ಸುಂದರ ರಾಮ ಶೆಟ್ಟಿ ಯಾರೆಂದು ಪ್ರಶ್ನಿಸಿದ್ದರು. ಈಗ ವಿಜಯ ಬ್ಯಾಂಕ್ ವಿಲೀನದ ಬಗ್ಗೆ ಮಾತನಾಡುತ್ತಿರುವ ನಾಯಕರು ಆಗ ಯಾವುದೇ ಧ್ವನಿ ಎತ್ತಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

* ವಿಜಯಾ ಬ್ಯಾಂಕ್‌ ಅಭಿವೃದ್ಧಿಯ ರೂವಾರಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ರಸ್ತೆಗೆ ಇಡುವ ಮೂಲಕ ವಿಜಯಾ ಬ್ಯಾಂಕ್ ಹೆಸರನ್ನು ಕಾಯಂ ಆಗಿ ಉಳಿಸುವ ಅವಕಾಶ ಕಾಂಗ್ರೆಸ್ ಪಕ್ಷದ ಕೈಯಲ್ಲಿತ್ತು. ಕೈಯಲ್ಲಿರುವ ಇರುವ ವಿಚಾರವನ್ನು ಕೈಬಿಟ್ಟು ಇದೀಗ ರಾಜಕೀಯ ಲಾಭಕ್ಕಾಗಿ ವಿಜಯಾ ಬ್ಯಾಂಕ್‌ ಹೆಸರನ್ನು ಬಳಸುತ್ತಿರುವುದು ಕಾಂಗ್ರೆಸ್‌ನ ಕೆಟ್ಟ ರಾಜಕಾರಕ್ಕೆ ಸಾಕ್ಷಿಯಾಗಿದೆ.

* ನಾನು ಸಂಸದನಾದರೆ ವಿಜಯಾ ಬ್ಯಾಂಕ್‌ಅನ್ನು ಮತ್ತೆ ಸ್ಥಾಪಿಸುತ್ತೇನೆ ಎಂಬ ಹೇಳಿಕೆಯನ್ನು ಮಿಥುನ್ ರೈ ನೀಡುತ್ತಿರುವುದು ಬಾಲಿಶ ಮತ್ತು ಹಾಸ್ಯಾಸ್ಪದವಾಗಿದೆ.

* ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಈಗಾಗಲೇ ಇನ್ನಷ್ಟು ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಪ್ರಸ್ತಾಪವಿದೆ. ಪರಿಸ್ಥಿತಿ ಹೀಗಿರುವಾಗ ವಿಜಯಾ ಬ್ಯಾಂಕ್‌ಅನ್ನು ಪುನರ್ ಸ್ಥಾಪನೆ ಎಂಬುವುದು ಶುದ್ಧ ರಾಜಕೀಯ ಹೇಳಿಕೆಯಾಗಿದೆ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.