
ಕರ್ನಾಟಕ ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆಯೇ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣರವರ ಭಾವಚಿತ್ರವನ್ನು ಅಳವಡಿಸಲು ಅಧಿಕೃತ ಆದೇಶ ಹೊರಡಿಸಿದ್ದರೂ ಇದುವರೆಗೂ ಅದು ಕಾರ್ಯಗತವಾಗಿಲ್ಲ . ಹಾಗಾಗಿ ಮೇ 7ರಂದು ಆಚರಣೆಯಾಗುತ್ತಿರುವ ಬಸವಜಯಂತಿಗೂ ಮುನ್ನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸದಿದ್ದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ . ಜಗದ್ಗುರು ಬಸವಣ್ಣನವರು ಯಾವುದೇ ಒಂದು ಧರ್ಮ , ಜಾತಿ , ವರ್ಗಕ್ಕೆ ಸೀಮಿತವಾದವರಲ್ಲ . 12ನೇ ಶತಮಾನದಲ್ಲಿಯೇ ಜಾತೀಯತೆ , ಕಂದಾಚಾರದ ವಿರುದ್ದ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು . ಜತೆಗೆ ಸಾಮಾಜಿಕ , ಆರ್ಥಿಕ ಸಮಾನತೆಗಾಗಿ ಅವಿರತ ಶ್ರಮಿಸಿ ಸಾಮಾಜಿಕ ಸುಧಾರಣೆ ತಂದ ಹರಿಕಾರರು . ಅಂತಹ ಮಹಾನುಭಾವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು 21ನೇ ಶತಮಾನವೇ ಬರಬೇಕಾಯಿತು .

ಬಸವಣ್ಣನವರ ನಂಬಿದ್ದ ತತ್ವ – ಸಿದ್ದಾಂತ ಹಾಗೂ ಆದರ್ಶಗಳ ಅಳವಡಿಕೆ ಇಂದಿನ ದಿನಮಾನಗಳಲ್ಲಿ ಸಮಾಜಕ್ಕೆ ತುರ್ತು ಅಗತ್ಯ ಮತ್ತು ಅನಿವಾರ್ಯ ಎನಿಸಿದೆ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು , ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣರವರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸುವಂತೆ ನಿರ್ಧರಿಸಿ ಸಚಿವಸಂಪುಟ ನಿರ್ಣಯ ಕೈಗೊಂಡು 2017ರ ಏಪ್ರಿಲ್ 29 ರಂದು ಸರ್ಕಾರಿ ಆದೇಶ ಹೊರಡಿಸಿದ್ದರು . ಅಲ್ಲದೆ ಬಸವಣ್ಣನವರ ಭಾವಚಿತ್ರದ ಮಾದರಿಯನ್ನೂ ಸರ್ಕಾರವೇ ಅಂತಿಮಗೊಳಿಸಿತ್ತು .

ಇದಕ್ಕೆ ಸರ್ವರೂ ಸ್ವಾಗತಿಸಿ ಸರ್ಕಾರವನ್ನು ಪ್ರಶಂಶಿಸಿದ್ದರು , ವೀರಶೈವ ಲಿಂಗಾಯತ ಸಮುದಾಯ ಗೌರವ ಮತ್ತು ಹೆಮ್ಮೆಯಿಂದ ಇದನ್ನು ಸ್ವಾಗತಿಸಿತ್ತು . ತ್ವರಿತ ಅನುಷ್ಟಾನದ ಆಶಯವನ್ನೂ ಹೊಂದಿತ್ತು . ಆದರೆ ದುರಾದೃಷ್ಟವಶಾತ್ ಜಾರಿಗೊಳಿಸಿ 2 ವರ್ಷ ಕಳೆದಿದ್ದರೂ , ಇಲ್ಲಿಯವರೆಗೆ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರವನ್ನು ಅಳವಡಿಸದೆ ಬಸವಣ್ಣರವರಿಗೆ ಸರ್ಕಾರವೇ ಅಗೌರವ ತೋರಿದೆ . ಅಲ್ಲದೆ , ಸರ್ಕಾರಿ ಆದೇಶ ಜಾರಿಗೆ ತರುವಲ್ಲಿ ಆಡಳಿತಯಂತ್ರವೇ ವಿಫಲವಾಗಿದೆ . ಸರ್ಕಾರದ ಇಂತಹ ನಿರ್ಲಕ್ಷ್ಯ ಧೋರಣೆಯನ್ನು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ . ಮೇ . 7ರಂದು ನಡೆಯಲಿರುವ ಬಸವ ಜಯಂತಿಯ ಒಳಗಾಗಿ , ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಅಳವಡಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು . ಇಲ್ಲದಿದ್ದಲ್ಲಿ ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಎಚ್ಚರಿಸಿದ್ದಾರೆ .
-ಪ್ರದೀಪ ಕಂಕಣವಾಡಿ ರಾಷ್ಟ್ರೀಯ ಅಧ್ಯಕ್ಷರು
City Today News
(citytoday.media)
9341997936
