ಕೊರೋನಾ ವಿಚಾರ; ಸಿದ್ದರಾಮಯ್ಯ ಟೀಕೆಗೆ ಸಚಿವ ಸಿ.ಟಿ.ರವಿ ಗರಂ; ಕೈ ನಾಯಕರ ವಿರುದ್ಧ ವಾಗ್ಬಾಣ

ಬೆಂಗಳೂರು: ದೇಶಾದ್ಯಂತ ಕೊರೋನಾ ವೈರಾಣು ಮರಣ ಮೃದಂಗ ಭಾರಿಸುತ್ತಿದೆ. ಅದರ ನಿಯಂತ್ರಣ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೋದಿಯವರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಕೆಂಡ ಕಾರಿರುವ ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಸಿ.ಟಿ.ರವಿ, ಕಾಂಗ್ರೆಸ್ ನಾಯಕರು ಕಣ್ಣಿದ್ದೂ ಕುರುಡರಂತೆ, ಕಿವಿಯಿದ್ದೂ ಕಿವುಡರಂತೆ ವರ್ತಿಸುವ ಸುಳ್ಳರು ಎಂದು ಬಣ್ಣಿಸಿದ್ದಾರೆ.

ಕೊರೋನಾ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮದ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಅಂಕಿ-ಸಂಖ್ಯೆಗಳನ್ನು ಮುಂದಿಟ್ಟು ಎದಿರೇಟು ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅದನ್ನು ಸಹಿಸಲಾಗದೆ ಕಾಂಗ್ರೆಸ್ ನಾಯಕರು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಮೀರ್ ಅಹ್ಮದ್ ಉದಾಹರಣೆ?

ಮೋದಿಯವರ ಸಮರ್ಥ ನಾಯಕತ್ವ ಇಲ್ಲದಿರುತ್ತಿದ್ದರೆ ಹಾಗೂ ಮೋದಿಯವರು ಸಕಾಲದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳದಿರುತ್ತಿದ್ದರೆ ನಮ್ಮ ಹಣೆಬರಹವೂ ಅಮೇರಿಕ, ಇಂಗ್ಲೆಂಡ್, ಇಟಲಿ, ಫ್ರಾನ್ಸ್, ಸ್ಪೇನ್ ದೇಶಗಳಂತೆ ಇರುತ್ತಿತ್ತು. ನಾವೂ ಬೀದಿಗಳಲ್ಲಿ ಹೆಣವಾಗುತ್ತಿದೀವು ಎಂದು ತೀಕ್ಷ್ಣ ಮಾತುಗಳಿಂದ ಸಚಿವ ಸಿ.ಟಿ.ರವಿ ಕೈ ನಾಯಕರನ್ನು ಛೇಡಿಸಿದ್ದಾರೆ.

ಜುಬಿಲಿಯಂಟ್ ಮತ್ತು ತಬ್ಲೀಗ್ ಪ್ರಕರಣಗಳು ಅಲ್ಲವಾಗಿದ್ದರೆ ನಮ್ಮ ದೇಶವೂ ಗ್ರೀನ್ ಝೋನ್’ನಲ್ಲಿರುತ್ತಿತ್ತು ಎಂದ ಸಚಿವ ರವಿ, ತಬ್ಲೀಗ್’ಗಳ ಬೆನ್ನಿಗೆ ನಿಂತವರು ನಿಮ್ಮ ಶಿಷ್ಯ ಜಮೀರ್ ಅಹ್ಮದ್ ಅಲ್ಲವೇ ಎಂದು ಪ್ರಶ್ನಿಸಿದರು. ನಿಮ್ಮ ಬಾಂಧವರ ನಿಲುವುಗಳಿಂದಾಗಿಯೇ ದೇಶದಲ್ಲಿ ಈ ರೀತಿಯ ಸಮಸ್ಯೆ ಎದುರಾಗಿರುವುದು ಎಂದು ಅವರು ಸಿದ್ದರಾಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಕಿ-ಅಂಶ.. ಲೆಕ್ಕ ಮುಂದಿಟ್ಟ ಸಚಿವ

ದೇಶದ ಜನ ಸಂಕಷ್ಟದಲ್ಲಿರುವಾಗ ಮೋದಿ ಸರ್ಕಾರವು ಭಾರತ ಇತಿಹಾಸದಲ್ಲೇ ಅತೀ ದೊಡ್ಡ ಪ್ಯಾಕೇಜ್ ನೀಡಿದೆ. ‘ಜೀವ ಮೊದಲು ಜೀವನ ಅನಂತರ’ ಎನ್ನುವ ಸೂತ್ರದಂತೆ ಬಡವರ ಜೀವ ಉಳಿಸುವ ಪ್ರಯತ್ನ ನಡೆದಿದೆ.

• ಜಾನ್ ಧನ್ ಯೋಜನೆಯಡಿ 20 ಕೋಟಿ 5 ಲಕ್ಷ ಜನರಿಗೆ 10 ಸಾವಿರ 25 ಕೋಟಿ ರೂಪಾಯಿ ಜಮೆ ಮಾಡಲಾಗಿದೆ.
• ಕಿಸಾನ್ ಸಮ್ಮಾನ್ ಯೋಜನೆಯಡಿ 8 ಕೋಟಿ ರೈತರು ಖಾತೆಗೆ 16,146 ಕೋಟಿ ರೂಪಾಯಿ ಜಮೆ ಮಾಡಲಾಗಿದೆ.
• ದಿವ್ಯಾಂಗರಿಗೆ, ಅಸಹಾಯಕರಿಗೆ 1405 ಕೋಟಿ ರೂಪಾಯಿ ಮಾಸಾಶನ ಸಿಕ್ಕಿದೆ.
• 2 ಕೋಟಿ 17 ಲಕ್ಷ ಜನ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3497 ಕೋಟಿ ರೂಪಾಯಿ ನೀಡಲಾಗಿದೆ.
• 162 ಕೋಟಿ ರೂಪಾಯಿ ಇಪಿಎಫ್ ಹಣ ಪಾವತಿಸಲಾಗಿದೆ.
• ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತವಾಗಿ 2 ತಿಂಗಳ ರೇಷನ್ ವಿತರಣೆ ಮಾಡಲಾಗಿದೆ.
• 2 ಕೋಟಿ 66 ಲಕ್ಷ ಕುಟುಂಬಗಳಿಗೆ ಉಜ್ವಲ ಗ್ಯಾಸ್ ವಿತರಿಸಲಾಗಿದೆ.

ಈ ಬಗ್ಗೆ ಗೊತ್ತಿದ್ದರೂ ಕಾಂಗ್ರೆಸ್ ನಾಯಕರು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.