ಸರ್ಕಾರಿ ನೌಕರರ ರಾಜ್ಯ ಮಟ್ಟದ ಪ್ರತಿಭಟನಾ ಧರಣಿ ಕಾರ್ಯಕ್ರಮ ದಿನಾಂಕ: 07.02.2024

ಕೇಂದ್ರ ಸರ್ಕಾರದ ನೀತಿಗಳು ದೈನಂದಿನ ಸರಕು ಸೇವೆಗಳ ಬೆಲೆಯೇರಿಕೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳ ಮಾಡಿ ಜನತೆಗೆ ಸಂಕಷ್ಟ ತಂದೊಡ್ಡಿದ್ದು, ಖಾಸಗೀಕರಣ ನೀತಿಗಳ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಹೆಚ್ಚಿನ ಲಾಭ ಹರಿದು ಹೋಗಲು ಈ ನೀತಿಗಳು ಸಹಕಾರಿಯಾಗಿವೆ. PFRDA ಕಾಯ್ದೆ / NPS ಪದ್ದತಿ ರದ್ದುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆ (OPS) ಮರುಸ್ಥಾಪಿಸಲು ಒತ್ತಾಯಿಸಿ ದೇಶಾದ್ಯಂತ ಸರ್ಕಾರಿ ನೌಕರರು ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರವು ಕೇವಲ ಪರಿಶೀಲನಾ ಸಮಿತಿ ರಚಿಸಿ ಮೌನವಾಗಿದೆ. ರಾಜ್ಯ ಮಟ್ಟದಲ್ಲಿ ಕೆಲವು ರಾಜ್ಯಗಳು ಎನ್.ಪಿ.ಎಸ್ ಪದ್ದತಿಯನ್ನು ರದ್ದುಪಡಿಸಿದ್ದರೂ ರಾಜಕೀಯ ಪಕ್ಷಗಳು/ ಸರ್ಕಾರಗಳು ಬದಲಾದಾಗ ಮತ್ತೆ NPS ಅನ್ನು ಮರುಸ್ಥಾಪಿಸಲು ಕ್ರಮ ವಹಿಸುತ್ತಿರುವ ಸುದ್ದಿಗಳು ರಾಜಸ್ತಾನದಂತಹ ರಾಜ್ಯಗಳಿಂದ ಬರುತ್ತಿವೆ.

ಕರ್ನಾಟಕ ರಾಜ್ಯದ ಸರಕಾರಿ ನೌಕರರು ದಕ್ಷಿಣ ರಾಜ್ಯಗಳಲ್ಲಿಯೇ ಅತಿ ಕಡಿಮೆ ಸಂಬಳ ಪಡೆಯುವ ನೌಕರರರಾಗಿದ್ದೇವೆ. ಪ್ರಸ್ತುತ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ಎರಡನೇ ಬಾರಿಗೆ 6 ತಿಂಗಳ ಕಾಲ ದಿನಾಂಕ: 15.03.2024ರವರೆಗೆ ವಿಸ್ತರಿಸಿರುವುದು ನೌಕರರಲ್ಲಿ ತೀವ್ರ ನಿರಾಶೆ ಮತ್ತು ಆಕ್ರೋಶ ಮೂಡಿಸಿದೆ. ರಾಜ್ಯ ಸರ್ಕಾರವು 7ನೇ ವೇತನ ಪರಿಷ್ಕರಣೆ ಜಾರಿಗೊಳಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ. 2016ರಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯದಲ್ಲಿ ಗುತ್ತಿಗೆ/ ದಿನಗೂಲಿ/ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಹೊರಗುತ್ತಿಗೆ ಏಜೆನ್ಸಿಗಳು ಶೋಷಣೆ ಮಾಡುತ್ತಿವೆ. ಘೋಷಣೆ ಮಾತ್ರವೇ ಆಗಿ ಉಳಿದಿರುವ ನಗದು-ರಹಿತ ವಿಮಾ ಯೋಜನೆ. ಅನುದಾನಿತ ಸಂಸ್ಥೆಗಳ ನೌಕರರು ಪಿಂಚಣಿ ವಂಚಿತರಾಗಿರುವುದು. ಅಸಂವಿಧಾನಿಕ ನಡತೆ ನಿಯಮಗಳು, ಪಿಡಿಒ ಅಧಿಕಾರಿಗಳ ಸಮಸ್ಯೆಗಳು, ನೌಕರ-ವಿರೋಧಿ ಅಂಶಗಳನ್ನು ಒಳಗೊಂಡಿರುವ ಆಡಳಿತ ಸುಧಾರಣೆಗಳು, ಇತ್ಯಾದಿ ನೌಕರ ಸಮಸ್ಯೆಗಳು ಆಗರವಾಗಿ ಬೆಳೆಯುತ್ತಿವೆ.

ಈ ಹಿನ್ನೆಲೆಯಲ್ಲಿ, ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ದಿನಾಂಕ: 07.02.2024 ಬುಧವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ನೌಕರರು ಒಂದು ದಿನದ ರಾಜ್ಯ ಮಟ್ಟದ ಪ್ರತಿಭಟನಾ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ರಾಜ್ಯ ಸರ್ಕಾರದ ವಿವಿಧ ಇಲಾಖಾ ಹಾಗೂ ವೃಂದ ಸಂಘಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡುತ್ತದೆ.

ಈ ಧರಣಿ ಕಾರ್ಯಕ್ರಮವು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ(ರಿ.)ದ ನೇತೃತ್ವದಲ್ಲಿ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ಸಮನ್ವಯ ನೌಕರರ ಸಂಘ(ರಿ.), ಕರ್ನಾಟಕ ರಾಜ್ಯ ಸರ್ಕಾರಿ ಪಿ.ಡಿ.ಓ ಕ್ಷೇಮಾಭ್ಯುದಯ ಸಂಘ(ರಿ.), ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಅನುದಾನಿತ ಪ್ರೌಢಶಾಲೆಗಳ ಕ್ಷೇಮಾಭ್ಯುದಯ ಸಂಘ(ರಿ.), ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ(ರಿ.), ಕರ್ನಾಟಕ ಸರ್ಕಾರ ಸಚಿವಾಲಯ ವಾಹನ ಚಾಲಕರ ಸಂಘ(ರಿ.), ಅಖಿಲ ಕರ್ನಾಟಕ ರಾಜ್ಯ ಪಿಂಚಣಿದಾರರ ಒಕ್ಕೂಟ, ಕಾನೂನು ಮಾಪನ ಶಾಸ್ತ್ರ ಇಲಾಖೆ ಪ.ಜಾ ಮತ್ತು ಪ.ಪಂ ನೌಕರರ ಸಂಘ, ಶಾಲಾ/ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ, ಕಾನೂನು ಮಾಪನ ಶಾಸ್ತ್ರ ಇಲಾಖೆ ಪರೀವೀಕ್ಷಕರ ಸಂಘ, ಕರ್ನಾಟಕ ರಾಜ್ಯ ಸರ್ಕಾರ ಗ್ರಂಥಾಲಯ ಇಲಾಖೆ ನೌಕರರ ಸಂಘ, ಕರ್ನಾಟಕ ರಾಜ್ಯ ಆಯುಷ್ ಶುಶೂಷಾಧಿಕಾರಿಗಳ ಸಂಘ, ಬಿ.ಬಿ.ಎಂ.ಪಿ ಪ.ಜಾ/ಪ.ಪಂ ಅಧಿಕಾರಿ/ನೌಕರರ ಕೇಂದ್ರ ಒಕ್ಕೂಟ. ಕರ್ನಾಟಕ ರಾಜ್ಯ ಅನುದಾನಿತ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಅನುದಾನಿತ ಬೋಧಕ/ಬೋಧಕೇತರ ಸಂಘಟನೆಗಳ ಒಕ್ಕೂಟ ಮತ್ತು ಇನ್ನಿತರೆ ಸಂಘಟನೆಗಳ ಒಡಗೂಡಿ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಿ ಅಂದು ಧರಣಿ ನಡೆಸಲಾಗುತ್ತಿದೆ.

ಹಾಗೂ ದಿನಾಂಕ: 16.02.2024ರಂದು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ(ರಿ.)ವು PFRDA ಕಾಯ್ದೆ / NPS ಪದ್ಧತಿ ರದ್ದುಪಡಿಸುವುದು ಸೇರಿದಂತೆ ಇನ್ನಿತರೆ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ/ರಾಜ್ಯ ಸರ್ಕಾರವನ್ನು ಒತ್ತಾಯಿಸಿ “ರಾಷ್ಟ್ರೀಯ ಮುಷ್ಕರ”ಕ್ಕೆ ಕರೆ ಕೊಟ್ಟಿದ್ದು, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಇದಕ್ಕೆ ಬೆಂಬಲ ನೀಡಿದೆ.

ಪ್ರಮುಖ ಬೇಡಿಕೆಗಳು:

1. ಶೇ. 40 ರಷ್ಟು ಹೆಚ್ಚಳದೊಂದಿಗೆ 7ನೇ ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿಗೊಳಿಸುವುದು.

2. ರಾಜ್ಯದ ಎಲ್ಲಾ ನೌಕರರಿಗೂ PFRDA ಕಾಯ್ದೆ / NPS ಪದ್ಧತಿ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ (OPS) ಮರುಸ್ಥಾಪಿಸುವುದು.

3. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು.

4. ಗುತ್ತಿಗೆ/ಹೊರಗುತ್ತಿಗೆ ಅರೆಕಾಲಿಕ ನೇಮಕಾತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ಸದರಿಯವರ ವೇತನವನ್ನು ಸರ್ಕಾರಿಂದ ನೇರವಾಗಿ ಖಾತೆಗೆ ಜಮಾ ಮಾಡುವುದು. ಇವರುಗಳನ್ನು ಎಲ್ಲಾ ನೇರ ನೇಮಕಾತಿಗಳಲ್ಲಿ ಖಾಯಂಗೊಳಿಸುವುದು. ಇನ್ನು ಮುಂದೆ ಗುತ್ತಿಗೆ/ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಟ್ಟು ಖಾಯಂ ನೇಮಕಾತಿ ಮಾಡಿಕೊಳ್ಳುವುದು.

5. ಕೋವಿಡ್ ನೆಪದಲ್ಲಿ ತಡೆಹಿಡಿಯಲಾಗಿರುವ 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ ಮಾಡುವುದು.

6. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಶೀಘ್ರ ಪರಿಷ್ಕರಣೆ ಮಾಡಿ, ಜೇಷ್ಠತಾ ಪಟ್ಟಿ ಸಿದ್ಧಪಡಿಸುವುದು ಹಾಗೂ ನಿಯಮಾನುಸಾರ ಪದೋನ್ನತಿ ನೀಡುವುದು.

7. ಆಡಳಿತ ಸುಧಾರಣೆಗಳ ನೆಪದಲ್ಲಿ ಇಲಾಖೆಗಳ ವಿಲೀನ, ನೌಕರರ ಸಂಖ್ಯೆ ಕಡಿತ, ಸಾರ್ವಜನಿಕ ಉದ್ದಿಮೆಗಳ/ಸರ್ಕಾರದ ಯೋಜನೆಗಳ ಖಾಸಗೀಕರಣ, ಹೊರಗುತ್ತಿಗೆ ನೇಮಕಾತಿ ಪ್ರಸ್ತಾವನೆಗಳನ್ನು ಕೈಬಿಡುವುದು

8. ಬಡ್ತಿ ಮೀಸಲಾತಿ ಕಾಯ್ದೆ ಸಂಪೂರ್ಣ ಅನುಷ್ಠಾನಗೊಂಡು ಬ್ಯಾಕ್ ಲಾಗ್‌ ಹುದ್ದೆ ಭರ್ತಿ ಮಾಡುವುದು.

9. ರಾಜ್ಯದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಕೆಲಸದ ಒತ್ತಡ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು “ತಜ್ಞರ ಸಮಿತಿ ನೇಮಕ ಮಾಡುವುದು.

10. ಎಲ್ಲಾ ನೌಕರರಿಗೂ ಹಾಗೂ ಎಲ್ಲಾ ನಿವೃತ್ತರಿಗೂ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿ ಮಾಡುವುದು.

11. ಮಹಿಳಾ ನೌಕರರ ಮೇಲಿನ ದೌರ್ಜನ್ಯ ತಡೆಗಟ್ಟುವುದು.

12. ಅನುದಾನಿತ ಶಾಲಾ/ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 60 ಸಾವಿರ ಬೋಧಕ/ಭೋದಕೇತರ ನಿಶ್ಚಿತ ಪಿಂಚಣಿ ಸೌಲಭ್ಯ ಮರುಸ್ಥಾಪಿಸುವುದು.

13. ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮ(2021) ಗಳಲ್ಲಿನ ನೌಕರ-ವಿರೋಧಿ ಅಂಶಗಳನ್ನು ಕೈಬಿಡುವುದು ಮುಂತಾದ ವಿಷಯಗಳನ್ನು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ವತಿಯುಂದ ತಿಳಿಸಲಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.