
ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಹಳ್ಳಿಕಾರ ಸಮುದಾಯದ ಪ್ರಥಮ ಪೀಠವಾಗಿರುವ ಹಳ್ಳಿಕಾರ ಮಠದ ದ್ವಿತೀಯ ವಾರ್ಷಿಕೋತ್ಸವ ಮತ್ತು ಶ್ರೀಗಳ ದೀಕ್ಷಾ ಪೀಠಾರೋಹಣ ಸಮಾರಂಭ ಫೆಬ್ರವರಿ 23, 2025, ಭಾನುವಾರ ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯಾತಿಗಣ್ಯರ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಇತಿಹಾಸ ಮತ್ತು ಸಮುದಾಯದ ಸೇವೆ
ಹಳ್ಳಿಕಾರ ಸಮುದಾಯವು ಪುರಾತನ ಕಾಲದಿಂದ ಪಶುಸಂಗೋಪನೆ ಮತ್ತು ಕೃಷಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಸಮಾಜದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಜಯನಗರ ಮತ್ತು ಮೈಸೂರು ಸಂಸ್ಥಾನಗಳ ಕಾಲದಲ್ಲಿ ಸೇನಾಧಿಪತಿಗಳಾಗಿ ಸೇವೆ ಸಲ್ಲಿಸಿದ್ದ ಇತಿಹಾಸ ಹೊಂದಿರುವ ಈ ಸಮುದಾಯ, ಪ್ರಸ್ತುತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಹಿತವನ್ನು ಪೋಷಿಸುವ ಉದ್ದೇಶದಿಂದ ಸಂಘಟನಾತ್ಮಕವಾಗಿ ಬೆಳೆಯುತ್ತಿದೆ.

ಮಠದ ಸ್ಥಾಪನೆ ಮತ್ತು ಧಾರ್ಮಿಕ ಕಾರ್ಯಗಳು
2021ರಲ್ಲಿ ಬೆಂಗಳೂರು ನಗರದಲ್ಲಿರುವ ಹಳ್ಳಿಕಾರ ಸಮುದಾಯದ ಮುಖಂಡರು ಮತ್ತು ಹಿರಿಯ ನ್ಯಾಯವಾದಿ ಶ್ರೀ ನಾಗಯ್ಯ ಅವರ ನೇತೃತ್ವದಲ್ಲಿ, ಸಾವಿರಾರು ಭಕ್ತರ ದಾನದಿಂದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಶೆಟ್ಟಿಗೊಂಡನಹಳ್ಳಿಯಲ್ಲಿ ಹಳ್ಳಿಕಾರ ಸಮುದಾಯದ ಪ್ರಪ್ರಥಮ ಮಠದ ಸ್ಥಾಪನೆಗೆ ಶಿಲಾನ್ಯಾಸ ನಡೆಯಿತು. ಮಠದ ಪೀಠಾಧಿಪತಿಯಾಗಿ ಶ್ರೀ ಶ್ರೀ ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿ ಅವರನ್ನು ನೇಮಕ ಮಾಡಲಾಯಿತು.
ಸಮುದಾಯ ಸೇವೆ ಮತ್ತು ಶಿಕ್ಷಣ
ಮಠದ ಆಶ್ರಯದಲ್ಲಿ ಎಸ್.ಹೆಚ್.ಎಂ. ಶಾಲಾ ಶಿಕ್ಷಣ ಸಂಸ್ಥೆ, ಕೋ-ಆಪರೇಟಿವ್ ಸೊಸೈಟಿ, ಗೋಶಾಲೆ ಸ್ಥಾಪನೆಯಾಗಿ, “ಅನ್ನ-ಅಕ್ಷರ-ಅರಿವು” ಎಂಬ ತತ್ವದಡಿ ಸಾಮಾಜಿಕ ಸೇವೆಗಳು ನಡೆಯುತ್ತಿವೆ. ಸಾವಿರಾರು ಭಕ್ತರು ತಮ್ಮ ಕುಟುಂಬದ ಹೆಸರಿನಲ್ಲಿ ದಾನವಾಗಿ ಕೊಠಡಿಗಳನ್ನು ನಿರ್ಮಿಸಿ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಿದ್ದಾರೆ.
ವಾರ್ಷಿಕೋತ್ಸವದ ವಿಶೇಷತೆ
ಈ ವರ್ಷ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ, ಭಕ್ತರು ಮತ್ತು ಹಳ್ಳಿಕಾರ ಸಮುದಾಯದ ಎಲ್ಲಾ ವರ್ಗದ ಜನರು ಈ ಪವಿತ್ರ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಹಳ್ಳಿಕಾರ ಮಠ ಟ್ರಸ್ಟ್ನ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಧರ್ಮದರ್ಶಿ ಮಂಡಳಿಯವರು ಕೋರಿದ್ದಾರೆ. ಮಠದ ಸೇವೆಯನ್ನು ಮುಂದುವರಿಸುವ ಉದ್ದೇಶದಿಂದ, ಮುಂದಿನ ದಶಕಕ್ಕೆ ಹಲವಾರು ಯೋಜನೆಗಳನ್ನು ರೂಪಿಸುವ ಸಂಕಲ್ಪವಿದೆ.
ಈ ಕುರಿತು ಪ್ರೆಸ್ ಕ್ಲಬ್ ಆಫ್ ಬೆಂಗಳೂರುದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಟ್ರಸ್ಟ್ನ ಅಧ್ಯಕ್ಷರಾದ ನಾಗಯ್ಯ, ಗೌರವಾಧ್ಯಕ್ಷ ಡಾ. ಪಟೇಲ್ ಪಾಂಡು ಮತ್ತು ಸಮುದಾಯದ ಪ್ರಮುಖರು ಮಾತನಾಡಿದರು. ಸಮುದಾಯದ ಏಳಿಗೆಗೆ ಈ ಕಾರ್ಯಕ್ರಮ ಪ್ರಮುಖ ಘಟ್ಟವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
City Today News 9341997936
