
ಬೆಂಗಳೂರು, ಏಪ್ರಿಲ್ 18:
ರಾಜ್ಯ ಸರ್ಕಾರದ ಜಾತಿ ಆಧಾರಿತ ಗಣತಿಯ ಅಂಕಿ ಅಂಶಗಳಲ್ಲಿ ಗಂಭೀರ ದೋಷವಿದ್ದು, ವಿಶ್ವಕರ್ಮ ಸಮಾಜದ ಜನಸಂಖ್ಯೆಯನ್ನು ತೀವ್ರವಾಗಿ ಕಡಿಮೆಗೊಳಿಸಿ ತೋರಿಸಲಾಗಿದೆ ಎಂಬ ಆರೋಪ ಹೊರವಿದ್ದು, ಈ ಕುರಿತು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ವಸಂತ ಮುರುಳಿ ಹಾಗೂ ಸಂಘದ ಹಿರಿಯ ಮುಖಂಡ ಸೋಮಶೇಖರ್ ಮಾತನಾಡಿದರು. “ರಾಜ್ಯದಲ್ಲಿ ಸುಮಾರು 20 ಲಕ್ಷ ವಿಶ್ವಕರ್ಮರು ಇದ್ದರೂ, ಈ ಜಾತಿ ಗಣತಿಯಲ್ಲಿ ನಮ್ಮ ಜನಸಂಖ್ಯೆಯನ್ನು ಕೇವಲ ಆರು ಲಕ್ಷ ಎಂದು ತೋರಿಸಲಾಗಿದೆ. ಇದು ವಾಸ್ತವಕ್ಕೆ ಸಂಪೂರ್ಣ ವಿರುದ್ಧವಾದ ದತ್ತಾಂಶ,” ಎಂದರು.
“ಹಿಂದುಳಿದ ವರ್ಗಗಳ ಜನಸಂಖ್ಯೆ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಸಲು ಈ ಗಣತಿ ನಡೆಸಿರುವುದು ಸ್ವಾಗತಾರ್ಹ. ಆದರೆ ಅದು ನಿಖರವಾಗಿರಬೇಕು. ತಪ್ಪಾದ ಅಂಕಿ ಅಂಶಗಳು ಸಮಾಜದ ಮೇಲೂ, ಸರ್ಕಾರದ ನೀತಿ ನಿರ್ಧಾರಗಳ ಮೇಲೂ ಪರಿಣಾಮ ಬೀರುತ್ತವೆ,” ಎಂದು ಅವರು ಎಚ್ಚರಿಸಿದರು.
ವಿಶ್ವಕರ್ಮ ಸಮಾಜದ ಮುಖಂಡರು ಮತ್ತು ಪೀಠಾಧಿಪತಿಗಳು ಕೂಡ ಈ ಬಗ್ಗೆ ಚಿಂತನೆ ವ್ಯಕ್ತಪಡಿಸಿದ್ದು, ತಕ್ಷಣದ ಮರುಜನಗಣತಿ ನಡೆಸಿ ತಪ್ಪಾದ ದತ್ತಾಂಶವನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
City Today News 9341997936
