
ಬೆಂಗಳೂರು, ಜೂನ್ 20, 2025:
ರಾಜ್ಯದಲ್ಲಿ ಒಳಮೀಸಲಾತಿ (ಇಂಟರ್ನಲ್ ರಿಸರ್ವೇಶನ್) ಜಾರಿಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿಗಳ ಒಕ್ಕೂಟ ಒತ್ತಾಯಿಸಿದೆ. ಸಮೀಕ್ಷೆಯ ಅವಧಿ ಮತ್ತೆ ವಿಸ್ತರಿಸಬೇಕೆಂಬ ಪ್ರಸ್ತಾವನೆಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ, “ಇನ್ನಷ್ಟು ವಿಳಂಬ ಸಮಾಜಿಕ ನ್ಯಾಯಕ್ಕೆ ಅಹಿತ” ಎಂದು ಒಕ್ಕೂಟದ ಮುಖಂಡರು ಎಚ್ಚರಿಸಿದ್ದಾರೆ.
2024ರ ಆಗಸ್ಟ್ 1ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಜಾರಿಗೆ ಅಧಿಕಾರ ನೀಡಿದ್ದು, ದತ್ತಾಂಶ ಆಧಾರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿತ್ತು.
ಆಯೋಗವು ಮೇ 5ರಿಂದ ಜಿಪಿಎಸ್ ತಂತ್ರಜ್ಞಾನ ನೆರವಿನಿಂದ ವೈಜ್ಞಾನಿಕ ಸಮೀಕ್ಷೆ ಆರಂಭಿಸಿತು. ಈಗಾಗಲೇ ಶೇ. 91-92ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ಶೇಕಡಾ 100ರಷ್ಟು ಮಾಹಿತಿಯ ಸಂಗ್ರಹವಾಗಿದೆ. ಇಂತಹ ಸಂದರ್ಭದಲ್ಲಿ ಅವಧಿ ವಿಸ್ತರಣೆ ಮಾಡುವುದು ನ್ಯಾಯಯುತವಲ್ಲ ಎಂದು ಒಕ್ಕೂಟದ ಮುಖಂಡರು ಹೇಳಿದರು.
“ಸಮೀಕ್ಷೆ ಸಾಕಷ್ಟು ಮಟ್ಟಿಗೆ ಮುಗಿದಿದೆ. ಈಗಾಗಲೇ ಒಂದು ವರ್ಷ ಕಳೆದಿದೆ. ಇನ್ನುಳಿದ ದತ್ತಾಂಶಗಳನ್ನು ಸರ್ಕಾರ ತ್ವರಿತವಾಗಿ ಸಂಗ್ರಹಿಸಿ, ಶೀಘ್ರದಲ್ಲೇ 101 ಜಾತಿಗಳಿಗೆ ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ಜಾರಿಗೆ ತರಬೇಕು” ಎಂದು ಬಸವರಾಜ್ ಕೌತಾಳ್, ಚಂದ್ರು ತರಹುಣಿಸೆ ಮತ್ತು ವೇಣುಗೋಪಾಲ್ ಮೌರ್ಯ ರವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಅವರು ಮುಂದುವರಿದು, “ಸಮಾಜದ ಹಿಂದಿನವರ್ಗಗಳಿಗೆ ನ್ಯಾಯ ನೀಡುವ ಈ ಸಂಧರ್ಭದಲ್ಲಿ ವಿಳಂಬ ಅಪರಾಧದ ಸಮಾನ. ಸರ್ಕಾರ ಈ ವಿಷಯದಲ್ಲಿ ನಿರ್ಧಾರಾತ್ಮಕ ನಡೆ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
City Today News 9341997936
