
ಬೆಂಗಳೂರು, ಆಗಸ್ಟ್ 1:
ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ರೈತರ ಒಗ್ಗಟ್ಟಿಗೆ ಶ್ರಮಿಸುತ್ತಿರುವ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಕೃಷಿ ಇಲಾಖೆ ಮತ್ತು ರಾಜ್ಯ ಸರ್ಕಾರದೊಂದಿಗೆ ಸಮನ್ವಯದಲ್ಲಿಯೇ ನಿರಂತರವಾಗಿ ಕೆಲಸ ಮಾಡುತ್ತಿದೆ.
ಇತ್ತೀಚೆಗೆ ಕೆಲವು ಮಾಧ್ಯಮ ವರದಿಗಳಲ್ಲಿ ರಾಜ್ಯದಲ್ಲಿ ರಸಗೊಬ್ಬರದ ಕೊರತೆಯ ಕುರಿತು ಉದ್ಭವಿಸುತ್ತಿರುವ ಸುದ್ದಿಗಳನ್ನು ಸಮಾಜ ಗಮನಿಸಿದೆ. ಆದರೆ ಈ ಬಗ್ಗೆ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಯಾವುದೇ ಸ್ಪಷ್ಟತೆಯಿಲ್ಲ ಎಂದು ಸಂಘಟನೆ ತಿಳಿಸಿದೆ. ಹವಾಮಾನ ವೈಪರಿತ್ಯದಿಂದ ಮಳೆಯ ಆರಂಭ ಮುಂಚಿತವಾಗಿರುವುದರಿಂದ ಗೊಬ್ಬರದ ಸಾಗಣೆಯಲ್ಲಿ ತಾತ್ಕಾಲಿಕ ವ್ಯತ್ಯಾಸ ಉಂಟಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಯೂರಿಯಾ ಲಭ್ಯತೆಯ ಕುರಿತಾಗಿ ಕೆಲವು ಜಿಲ್ಲೆಗಳಲ್ಲಿ ರೈತರಲ್ಲಿ ಆತಂಕ ಉಂಟಾಗಿರುವಂತಿದ್ದರೂ, ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಕೃಷಿ ಸಚಿವರು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಗೊಬ್ಬರ ಸರಬರಾಜು ವ್ಯವಸ್ಥಿತವಾಗಿರಲು ಶ್ರಮಿಸುತ್ತಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ಹೊತ್ತಲ್ಲಿಯೂ ಡಿ.ಎ.ಪಿ. ಕೊರತೆಯಾಗದಂತೆ ಕ್ರಮ ವಹಿಸಿರುವ ಸರ್ಕಾರ, ಈ ವರ್ಷವೂ ಸಮಾನ ಗಂಭೀರತೆಯೊಂದಿಗೆ ರೈತರ ನಿಗಾ ಮತ್ತು ಬೆಂಬಲಕ್ಕೆ ಮುಂದಾಗಿದೆ.
ಈ ವರ್ಷದ ಮುಂಗಾರು ಮೊದಲೇ ಪ್ರಾರಂಭವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಹೆಚ್ಚುವರಿ ಬಿತ್ತನೆ ನಡೆದಿದೆ. ಪ್ರಮುಖ ಅಣೆಕಟ್ಟುಗಳು ಕೂಡ ಭರ್ತಿಯಾಗಿರುವುದರಿಂದ ಬಿತ್ತನೆಯು ಪೂರಕವಾಗಿ ನಡೆಯುತ್ತಿದೆ.
ಕೇಂದ್ರ ಸರ್ಕಾರದಿಂದ ಲಾಕಿ ಇರುವ ಗೊಬ್ಬರದ ಪೂರೈಕೆ ಶೀಘ್ರವಾಗಿ ನೆರವೇರಿಸಲು ಪಕ್ಷಭೇಧ ಮರೆತು ರಾಜ್ಯದ ಸಂಸದರು ಒತ್ತಡ ಹಾಕಬೇಕೆಂಬುದು ಸಂಘಟನೆಯ ವಿನಂತಿ. ಗೊಬ್ಬರದ ಕೊರತೆಯ ನಡುವೆಯೂ ನ್ಯಾನೋ ಯೂರಿಯಾ ಬಳಕೆಯ ಮೂಲಕ ಪರ್ಯಾಯ ಪರಿಹಾರವನ್ನು ಇಲಾಖೆ ಪ್ರೋತ್ಸಾಹಿಸುತ್ತಿದ್ದು, ರೈತರಿಂದ ಸಹಕಾರ ಅಗತ್ಯವಾಗಿದೆ.
ಈ ಕುರಿತು ಮಾಹಿತಿ ನೀಡಿದ ಕೃಷಿಕ ಸಮಾಜದ ಆಡಳಿತಾಧ್ಯಕ್ಷ ಮಂಜುನಾಥ್ಗೌಡ ಎಸ್.ಆರ್ ಅವರು, “ಇನ್ನಷ್ಟು ರೈತರಿಗೆ ನ್ಯಾನೋ ಯೂರಿಯಾದ ಮಹತ್ವ ತಲುಪಿಸಲು ಇಲಾಖೆ ಸಮರ್ಪಕ ಜಾಗೃತಿ ಕಾರ್ಯಕ್ರಮ ಮತ್ತು ದಾಸ್ತಾನು ವ್ಯವಸ್ಥೆ ಕೈಗೊಂಡಿದೆ. ರೈತರು ಸಹಕಾರ ನೀಡಬೇಕೆಂದು ಮನವಿ” ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
City Today News 9341997936
