“ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ತೀವ್ರ: ಅಧ್ಯಕ್ಷೆ ಶ್ರೀಮತಿ ಶೈಲಾ ಕೆ.ಡಿ ಎಚ್ಚರಿಕೆ”

ಪೌರಸೇವಾ ನೌಕರರ ದೀರ್ಘಕಾಲದ ಬೇಡಿಕೆಗಳಿಗೆ ಸ್ಪಂದನೆ ಬೇಡಿಕೆ
ಫೆ. 28ರಂದು ಗಂಗಾವತಿಯಲ್ಲಿ ಪದಗ್ರಹಣ ಸಮಾರಂಭ

ಬೆಂಗಳೂರು: ರಾಜ್ಯದ ಪೌರಸೇವಾ ನೌಕರರು ಕಳೆದ ಮೂರು ದಶಕಗಳಿಂದ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೂತನ ಅಧ್ಯಕ್ಷೆ ಶ್ರೀಮತಿ ಶೈಲಾ ಕೆ.ಡಿ ಒತ್ತಾಯಿಸಿದರು.

ಸರ್ವಾನುಮತದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಅವರು ಹಾಗೂ ಸಂಘದ ಹಿರಿಯ ಉಪಾಧ್ಯಕ್ಷ ಶ್ರೀ ಜಿ. ನೀಲಕಂಠ ಸ್ವಾಮಿ ಮತ್ತು ಇತರ ಪದಾಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಪೌರಸೇವಾ ನೌಕರರು ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸುಮಾರು ಎಂಟು ಪ್ರಮುಖ ಬೇಡಿಕೆಗಳು 30 ವರ್ಷಗಳಿಂದ ಬಾಕಿಯೇ ಉಳಿದಿವೆ. ವೇತನ ಶ್ರೇಣಿ ಪರಿಷ್ಕರಣೆ, ಸೇವಾ ಭದ್ರತೆ, ಪದೋನ್ನತಿ ನಿಯಮಾವಳಿ ಸ್ಪಷ್ಟೀಕರಣ ಸೇರಿದಂತೆ ಹಲವು ವಿಷಯಗಳಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.

ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಅನುಷ್ಠಾನಗೊಳಿಸಬೇಕು. ಇಲ್ಲವಾದಲ್ಲಿ ಸಂಘವು ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವುದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಫೆಬ್ರವರಿ 28ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು
ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಮುಖ ಪದಾಧಿಕಾರಿಗಳಾದ ಶ್ರೀ ನೀಲಕಂಠ, ಶ್ರೀ ರಾಘವೇಂದ್ರ, ಶ್ರೀ ರ. ಮರಿಯಪ್ಪ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಪೌರಸೇವಾ ನೌಕರರು ಸಮಾರಂಭಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಸಂಘದ ಮುಂದಿನ ಕಾರ್ಯಯೋಜನೆ ಹಾಗೂ ಹೋರಾಟದ ದಿಕ್ಕು ಈ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ತಿಳಿಸಲಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.