
ಬೆಂಗಳೂರು: ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿ ಅನುಮೋದನೆ ನೀಡಿರುವ ಸಂದರ್ಭದಲ್ಲಿ, ಅದೇ ಸಮಯದಲ್ಲಿ ಒಳ ಮೀಸಲಾತಿ ಅನ್ವಯವಾಗದಂತೆ 56 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸರ್ಕಾರ ಕೈಗೊಂಡಿರುವ ಫೆಬ್ರವರಿ 26ರ ಸಚಿವ ಸಂಪುಟದ ತೀರ್ಮಾನವು ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಒಳಮೀಸಲಾತಿ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ತೀರ್ಮಾನವು ಕಳೆದ 35 ವರ್ಷಗಳಿಂದ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟಕ್ಕೆ ಮಹಾದ್ರೋಹವೆಂದು ಆರೋಪಿಸಿದ ಹೋರಾಟಗಾರರು, ಸರ್ಕಾರದ ಕ್ರಮವನ್ನು ಖಂಡಿಸಿ ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಜನರು ಸೇರಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಚಿತ್ರದುರ್ಗ ಸಮಾವೇಶದಲ್ಲಿಯೂ ಇದೇ ಮಾತು ಪುನರಾವರ್ತಿತವಾಗಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಈ ಬಗ್ಗೆ ಗಂಭೀರ ಪ್ರಯತ್ನ ನಡೆದಿಲ್ಲ ಎಂದು ಹೋರಾಟಗಾರರು ದೂರಿದರು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಹೋರಾಟದ ಒತ್ತಡದಿಂದಾಗಿ ಸರ್ಕಾರ 2025ರ ಆಗಸ್ಟ್ 25ರಂದು ಒಳ ಮೀಸಲಾತಿ ಜಾರಿಗೆ ತರುವುದಾಗಿ ತಾತ್ವಿಕ ಒಪ್ಪಿಗೆ ನೀಡಿದೆಯಾದರೂ, ನೇಮಕಾತಿಗಳ ವಿಚಾರದಲ್ಲಿ ಗೊಂದಲಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದರೂ, ಅದಕ್ಕೆ ಅನುಗುಣವಾಗಿ ಉದ್ಯೋಗ ಅವಕಾಶಗಳನ್ನು ನೀಡದೇ ಸಾವಿರಾರು ಹುದ್ದೆಗಳನ್ನು ಕಡಿತಗೊಳಿಸಿರುವುದು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುವಂತಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟಗಾರರ ನಿಯೋಗವನ್ನು ಭೇಟಿ ಮಾಡಿ ಒಳ ಮೀಸಲಾತಿ ಕುರಿತು ಸಂಪೂರ್ಣ ಚರ್ಚೆ ನಡೆಸಲು ಮಾರ್ಚ್ 27ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯುವುದಾಗಿ ಹಾಗೂ ಒಳ ಮೀಸಲಾತಿ ಜಾರಿಯಾಗದೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಆದರೆ ಹಿಂದಿನ ಸರ್ಕಾರಗಳ ಅನುಭವದ ಹಿನ್ನೆಲೆ ಈ ಭರವಸೆಯ ಮೇಲೂ ಸಂಪೂರ್ಣ ನಂಬಿಕೆ ಇಡುವುದು ಕಷ್ಟವೆಂದು ಹೇಳಿದ ಹೋರಾಟಗಾರರು, ಮಾರ್ಚ್ 27ರವರೆಗೆ ಸರ್ಕಾರದ ಮೇಲೆ ವಿವಿಧ ರೀತಿಯಲ್ಲಿ ಒತ್ತಡ ಮುಂದುವರಿಸುವುದಾಗಿ ಎಚ್ಚರಿಸಿದರು. ಅಂದು ಸಹ ಸರ್ಕಾರ ಒಳ ಮೀಸಲಾತಿ ಪರ ತೀರ್ಮಾನ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅವರು ಹೇಳಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಮಾರಾಸಂದ್ರ ಮುನಿಯಪ್ಪ, ಎಸ್. ಮಾರಪ್ಪ, ಅಂಬಣ್ಣ ಆರೋಲಿಕರ್, ನರಸಪ್ಪ ದಂಡೋರ, ಗುರುಮೂರ್ತಿ, ಫರ್ನಾಂಡಿಸ್ ಇಪ್ಪಳಗಾಂವ್ ಹಾಗೂ ಚಂದ್ರ ತರಹುಣಿಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
City Today News 9341997936
