‘ಅನಿಲ ಇಲ್ಲ, ಆದಾಯ ಇಲ್ಲ’: ಆಟೋ ಚಾಲಕರ ತೀವ್ರ ಆಕ್ರೋಶ, ಕೇಂದ್ರದ ವಿರುದ್ಧ ಘೋಷಣೆಗಳು

ಆಟೋಗಳಿಗೆ ಅನಿಲ ಕೊರತೆ ವಿರುದ್ಧ ಚಾಲಕರ ಸಂಘಟನೆಗಳ ಬೃಹತ್ ಪ್ರತಿಭಟನೆ

ಬೆಂಗಳೂರು, ಮಾ.17: ಆಟೋಗಳಿಗೆ ಅಗತ್ಯವಾದ ಅನಿಲ ಸಿಲಿಂಡರ್‌ಗಳ ತೀವ್ರ ಕೊರತೆ ಉಂಟಾಗಿರುವುದನ್ನು ಖಂಡಿಸಿ ವಿವಿಧ ಚಾಲಕರ ಸಂಘಟನೆಗಳು ಮಂಗಳವಾರ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.

ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್, ಸಂಚಾರಿ ಚಾಲಕರ ಸೇವಾ ಟ್ರಸ್ಟ್ ಹಾಗೂ ಸ್ನೇಹಜೀವಿ ಚಾಲಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಚಾಲಕರು ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಫ್ರೀಡಂ ಪಾರ್ಕ್ ಮುಂಭಾಗ ಆಟೋಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಸಂಕಷ್ಟದ ಸಂಕೇತ ನೀಡಿದ ಅವರು, ಖಾಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪ್ರದರ್ಶಿಸಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಆಟೋ ಚಾಲಕರು ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಿದರು. “ಕೇಂದ್ರ ಸರ್ಕಾರದ ನೀತಿಗಳಿಂದ ಆಟೋ ಚಾಲಕರಿಗೆ ಅನ್ಯಾಯವಾಗುತ್ತಿದೆ. ಅನಿಲದ ಕೊರತೆಯಿಂದ ದಿನನಿತ್ಯದ ಆದಾಯವೇ ಕುಂಠಿತವಾಗಿದ್ದು, ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಪ್ರತಿಯೊಬ್ಬ ಆಟೋ ಚಾಲಕರ ಕುಟುಂಬಕ್ಕೂ ತಕ್ಷಣ ಹತ್ತು ಸಾವಿರ ರೂ. ಪರಿಹಾರ ನೀಡಬೇಕು,” ಎಂದು ಅವರು ಆಗ್ರಹಿಸಿದರು.

ಅದೇ ವೇಳೆ, ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ಮನೆಮನೆಗಳಲ್ಲಿ ಸಂಕಷ್ಟ ಉಂಟುಮಾಡಿದೆ. ಆಟೋಗಳಿಗೆ ಅಗತ್ಯವಾದ ಅನಿಲವೂ ಬಂಕ್‌ಗಳಲ್ಲಿ ಸಿಗದಿರುವುದರಿಂದ ಚಾಲಕರು ದ್ವಂದ್ವ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಅವರು ಹೇಳಿದರು.

ಸ್ನೇಹಜೀವಿ ಚಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ ಹಾಗೂ ಸಂಚಾರಿ ಸತೀಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.