ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಬೇಡ: ರೇವತಿ ಕಾಮತ್ ಎಚ್ಚರಿಕೆ

ಪರಿಸರ ಉಳಿಸುವ ಜವಾಬ್ದಾರಿ ನಮ್ಮದೆ: ರೇವತಿ ಕಾಮತ್

‘ಧೀ’ ಆಸ್ಪತ್ರೆಯ ವತಿಯಿಂದ ‘ಧೀ ಶಕ್ತಿ’ ಕಾರ್ಯಕ್ರಮ – ಮಹಿಳಾ ಸಾಧಕರಿಗೆ ಗೌರವ

ಬೆಂಗಳೂರು, ಮಾ.08: ಮುಂದಿನ ತಲೆಮಾರಿಗೆ ಉತ್ತಮ ಪರಿಸರವನ್ನು ಉಳಿಸಿ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪರಿಸರವಾದಿ ರೇವತಿ ಕಾಮತ್ ಹೇಳಿದರು.

ಕನಕಪುರ ರಸ್ತೆಯಲ್ಲಿರುವ ‘ಧೀ (DHEE)’ ಆಸ್ಪತ್ರೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಧೀ ಶಕ್ತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇಂದಿನ ಸಮಾಜದಲ್ಲಿ ಜನರು ತಮ್ಮ ವೈಯಕ್ತಿಕ ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸುತ್ತಿದ್ದರೂ, ಪರಿಸರ ಸಂರಕ್ಷಣೆ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಕಾರ್ಯಗಳನ್ನು ನಿಯಂತ್ರಿಸುವ ಅಗತ್ಯ ಇದೆ,” ಎಂದು ಅವರು ಹೇಳಿದರು.

ಇಂದಿನ ನಗರಾಭಿವೃದ್ಧಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಪರಿಸರ ಸಂರಕ್ಷಣೆ ಬಗ್ಗೆ ಸಾಕಷ್ಟು ಕಾಳಜಿ ಕಾಣಿಸುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. “ಮನೆಯಲ್ಲಿ ಬೆಳೆಸುವ ಸಸಿಗಳ ಬಗ್ಗೆ ಸಹ ನಮಗೆ ಸಮರ್ಪಕ ತಿಳುವಳಿಕೆ ಇಲ್ಲ. ರೈತರು ಕೂಡ ಅನವಶ್ಯಕವಾಗಿ ಕೀಟನಾಶಕಗಳನ್ನು ಬಳಸುತ್ತಿರುವುದು ಪರಿಸರ ಹಾನಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಜಾಗೃತಿ ಅಗತ್ಯ,” ಎಂದು ಹೇಳಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅನುಪಮಾ ಹೊಸಕೆರೆ ಮಾತನಾಡಿ, “ಇತಿಹಾಸವನ್ನು ನೋಡಿದರೆ ಮಹಿಳೆಯರ ಶಕ್ತಿ ಅಪಾರವಾಗಿದೆ. ಮಹಿಳೆಯರು ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಯಾವುದೇ ಕಷ್ಟ ಬಂದರೂ ಧೈರ್ಯ ಕಳೆದುಕೊಳ್ಳಬಾರದು. ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ, ಮಹಿಳೆಯರ ಸಾಮರ್ಥ್ಯ ಮತ್ತು ಸಾಧನೆಗಳನ್ನು ಸಮಾಜಕ್ಕೆ ತೋರಿಸುವ ವೇದಿಕೆಯಾಗಬೇಕು,” ಎಂದು ಹೇಳಿದರು.

ಈ ಸಂದರ್ಭದಲ್ಲಿ ನಟಿ ಗಿರಿಜಾ ಲೋಕೇಶ್, ಹೇಮಾ ಶಾನಭೋಗ್, ಪತ್ರಕರ್ತೆ ಮಿನಿ ಥಾಮಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಸುಪ್ರಜಾ ಚಂದ್ರಶೇಖರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

City Today News 9341997936