
ಶಿಕ್ಷಣ ಇಲಾಖೆಯು ಹೊಸ ಪರಿಕಲ್ಪನೆಯೊಂದಿಗೆ 4 ರಿಂದ 6 ವರ್ಷದ ಮಕ್ಕಳಿಗೆ ಎಲ್.ಕೆ.ಜಿ-ಯುಕೆಜಿ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲು ಸುತ್ತೋಲೆ ಹೊರಡಿಸಿದೆ. ಇದುವರೆಗೂ ರಾಜ್ಯದಲ್ಲಿ 2524 ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಸರ್ಕಾರದ ಐಸಿಡಿಎಸ್ ಯೋಜನೆಯಿಂದ ನಡೆಯುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಶಾಲಾಪೂರ್ವ ಶಿಕ್ಷಣ ಕುರಿತ ಇಸಿಸಿಇ ಅಂಶಗಳ ಜಾರಿಗೆ ತೀವ್ರ ಧಕ್ಕೆಯಾಗಿದೆ. ಆದ್ದರಿಂದಲೇ ಕಳೆದ ಜೂನ್ 3 ರಿಂದ ರಾಜ್ಯವ್ಯಾಪಿ ಹೋರಾಟಗಳು ಆರಂಭವಾಗಿದ್ದು, ಬೆಂಗಳೂರಿನಲ್ಲಿ ಜೂನ್ 19 ಮತ್ತು 20 ರಂದು ಬೃಹತ್ ಹೋರಾಟ ನಡೆದಿದೆ. ಶಿಕ್ಷಣ ಇಲಾಖೆಯವರ ವಾದ ಏನೆಂದರೆ, ಬಡವರ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕು. ಒಂದನೇ ತರಗತಿಗೆ ಬರುವ ಮಗು ಶಾಲಾ ವ್ಯವಸ್ಥೆಗೆ ಸಿದ್ಧವಾಗಿರಬೇಕು ಮತ್ತು ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸಬೇಕು, ಆದ್ದರಿಂದ ಮಕ್ಕಳು 4 ವರ್ಷದಿಂದ ಮೇಲ್ಪಟ್ಟವರಿರುವಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕು ಎಂಬುದಾಗಿದೆ.
ಯಾವುದೇ ಮಗುವಿನ 40% ದೈಹಿಕ ಬೆಳವಣಿಗೆ 85% ಮಾನಸಿಕ ಬೆಳವಣಿಗೆಯಾಗುವ ಸಂದರ್ಭದಲ್ಲಿ ಲಾಲನೆ-ಪಾಲನೆ. ಪೋಷಣೆ ಮತ್ತು ಶಿಕ್ಷಣವನ್ನು ಕೊಡುವ ಸಲುವಾಗಿಯೇ 1975 ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ, ಅಂಗನವಾಡಿ ಕೇಂದ್ರದ ಪರಿಕಲ್ಪನೆ ಕೂಡ ಬಂದಿರುವುದು. ಶಿಕ್ಷಣ ಇಲಾಖೆಯು ಹೊರಡಿಸಿರುವ ಈ ಮೇಲಿನ ಆದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿ 3- 4 ವರ್ಷದ ಮಕ್ಕಳು ಮಾತ್ರವೇ ಉಳಿಯುತ್ತವೆ. ಆಗ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಆಗುತ್ತದೆ. 49 ವರ್ಷಗಳಿಂದ ಸರ್ಕಾರದ ಮಾರ್ಗದರ್ಶನದಲ್ಲಿಯೇ ಐಸಿಡಿಎಸ್ ಮೂಲಕ ನಡೆಸಲಾಗುತ್ತಿರುವ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ಎಲ್ಲಾ ಅಂಶಗಳನ್ನು ಒಳಗೊಂಡ ಶಾಲಾಪೂರ್ವ ಶಿಕ್ಷಣಕ್ಕೆ ಗಂಭೀರವಾಗಿ ಧಕ್ಕೆಯಾಗುತ್ತದೆ. ಈ ಯೋಜನೆ ಯಾವಾಗ ಬೇಕಾದರೂ ಕುಸಿದು ಕಣ್ಮರೆಯಾಗುವ ಸಾಧ್ಯತೆ ಇದೆ.
ಆದ್ದರಿಂದ ನಾವು “ಐಸಿಡಿಎಸ್ ಉಳಿಸಿ; ಮಕ್ಕಳನ್ನು ರಕ್ಷಿಸಿ” ಆಂದೋಲನ ಸಮಿತಿಯ ಪರವಾಗಿ ಈ ಕೆಳಕಂಡ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡುತ್ತಿದ್ದೇವೆ.
1. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಪರಸ್ಪರ ಚರ್ಚಿಸದೆ ಶಿಕ್ಷಣ ಇಲಾಖೆ ಏಕಮುಖವಾಗಿ ತಂದಿರುವ ಈ ಸುತ್ತೋಲೆಗಳಿಂದ ಆಗಿರುವ ಗೊಂದಲವನ್ನು ನಿವಾರಿಸಲು, ಎರಡೂ ಇಲಾಖೆಗಳು ಪರಸ್ಪರ ಪ್ರಜಾಸತ್ತಾತ್ಮಕವಾಗಿ ಚರ್ಚಿಸಿ, ಎರಡೂ ಇಲಾಖೆಗಳು ನಡೆಸುತ್ತಿರುವ ಪೂರ್ವ ಪ್ರಾಥಮಿಕ ಶಿಕ್ಷಣದ ಅಗತ್ಯತೆಗಳು ಮತ್ತು ಅದರ ಪರಿಣಾಮಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಬೇಕು. ಅಲ್ಲಿಯ ತನಕ 11-6-2024 ರ ಮತ್ತು 14-05-2024 ರ ಆದೇಶಗಳನ್ನು ತಡೆಹಿಡಿಯಬೇಕು, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ 7 ಜಿಲ್ಲೆಗಳ ವ್ಯಾಪ್ತಿಯನ್ನೂ ಒಳಗೊಂಡು ರಾಜ್ಯದ ಎಲ್ಲಿಯೂ ಜಾರಿಯಾಗಬಾರದು.
2 . ಅಂಗನವಾಡಿ ಕೇಂದ್ರದ ಹೆಸರು ‘ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರ’ ಎಂದು ಪರಿವರ್ತಿಸುವುದು.
3. PUC ಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿರುವ ಮತ್ತು ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಮೊದಲ ಆದ್ಯತೆಯಲ್ಲಿ ಆಯ್ಕೆ ಮಾಡಿಕೊಳ್ಳುವುದು.
4. ನಿರಂತರ ಕೌಶಲ್ಯಭರಿತ ತರಬೇತಿಗಳನ್ನು ಕೊಡುವುದು.
5. ಸರ್ಕಾರದಿಂದ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಮತ್ತು ಪೂಗಳನ್ನು ನೀಡುವುದು.
6. ECCE ನೀಡಿದ ಮಗುವಿಗೆ T.C ಕೊಡುವ ವ್ಯವಸ್ಥೆ ತರಬೇಕು.
7. ಅಂಗನವಾಡಿ ಕಾರ್ಯಕರ್ತರನ್ನು “ಶಿಕ್ಷಕಿ” ಎಂದು ಹೆಸರಿಸಿ ಪದನಾಮ ಬದಲಿಸುವುದು.
8. ICDS ನಲ್ಲಿರುವ ECCE ಗೆ ಅನುದಾನವನ್ನು ನಿರಂತರವಾಗಿ ಹೆಚ್ಚಳ ಮಾಡುವುದು.
9. ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವನ್ನು ಈ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ನೀಡುವುದು.
10. ECCE ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡುವ ಬಗ್ಗೆ ಕಾನೂನು ರೂಪಿಸುವುದು.
11. ಅಂಗನವಾಡಿ ಕಾರ್ಯಕರ್ತೆಯರನ್ನು ನಿರಂತರವಾಗಿ ಚುನಾವಣಾ ಕೆಲಸಗಳಿಂದ ಮುಕ್ತಿಗೊಳಿಸುವುದು. (ಚುನಾವಣಾ ಕೆಲಸಗಳಿಗೆ ನಿವೃತ್ತ ಅಂಗನವಾಡಿ ನೌಕರರನ್ನು ಬಳಸಬಹುದು).
12. ICDS ಯೋಜನೆಯನ್ನು ಪ್ರತ್ಯೇಕ ನಿರ್ದೇಶನಾಲಯವಾಗಿ ಪರಿವರ್ತಿಸಬೇಕು ಎಂದು ಪ್ರೊ. ಟಿ. ಆರ್. ಚಂದ್ರಶೇಖರ ಡಾ. ವಿಜಯಮ್ಮ,ಬಡಗಲಪುರ ನಾಗೇಂದ್ರ,ಬಿ. ಶ್ರೀಪಾದ ಭಟ್,ಕೆ.ಎಸ್. ವಿಮಲಾ, ಶಶಾಂಕ್,ಎಸ್. ವರಲಕ್ಷ್ಮಿ, ಎಚ್. ಎಸ್. ಸುನಂದಾ ರವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಪ್ರಕಟಣೆಯಲ್ಲಿ ಐಸಿಡಿಎಸ್ ಉಳಿಸಿ; ಮಕ್ಕಳನ್ನು ರಕ್ಷಿಸಿ ಆಂದೋಲನ ಸಮಿತಿಯ ಪರವಾಗಿ ತಿಳಿಸಿದರು.
City Today News 9341997936

You must be logged in to post a comment.