ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣವನ್ನು ಕಡೆಗಣಿಸಿ ಸರ್ಕಾರ ನೇಮಕಾತಿ ಪ್ರಕ್ರಿಯೆ ಮುಂದುವರಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ RPI(B) ಹಾಗೂ ದಲಿತ ಸಂಘರ್ಷ ಸಮಿತಿ (ದ.ಸಂ.ಸ) ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಸಜ್ಜಾಗಿರುವುದಾಗಿ ಘೋಷಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ RPI(B) ರಾಷ್ಟ್ರೀಯ ಅಧ್ಯಕ್ಷ ಡಾ. ಎನ್. ಮೂರ್ತಿ ಅವರು, ಪರಿಶಿಷ್ಟರ ಮೀಸಲಾತಿ 101 ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ. ಕಳೆದ 35 ವರ್ಷಗಳಿಂದ ಮಾದಿಗ ಹಾಗೂ ಸಂಬಂಧಿತ ಸಮುದಾಯಗಳು ಒಳಮೀಸಲಾತಿ ವರ್ಗೀಕರಣಕ್ಕಾಗಿ ನಿರಂತರ ಹೋರಾಟ ನಡೆಸಿವೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಏಳು ನ್ಯಾಯಾಧೀಶರ ಪೀಠ ವರ್ಗೀಕರಣಕ್ಕೆ ಅನುಮತಿ ನೀಡಿದ ತೀರ್ಪು ನೀಡಿತ್ತು ಎಂದು ಅವರು ಸ್ಮರಿಸಿದರು.
ಈ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಿತ್ತು. ಆದರೆ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸದೆ ಸರ್ಕಾರ ‘ಎ’ ವರ್ಗ (ಮಾದಿಗ ಮತ್ತು ಸಂಬಂಧಿತ) – ಶೇ.6, ‘ಬಿ’ ವರ್ಗ (ಹೊಲೆಯ ಮತ್ತು ಸಂಬಂಧಿತ) – ಶೇ.6, ‘ಸಿ’ ವರ್ಗ – ಶೇ.5 ಎಂದು ಒಟ್ಟು ಶೇ.17ರ ಮೀಸಲಾತಿ ವಿಧೇಯಕ ತಂದರೂ, ನಂತರ ರಾಜಕೀಯ ಒತ್ತಡಕ್ಕೆ ಮಣಿದು ಹಿಂಜರಿದಿದೆ ಎಂದು ಆರೋಪಿಸಿದರು.
ವರ್ಗೀಕರಣ ವಿರೋಧಿಗಳು ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟ ನಿಲುವು ಕೈಗೊಳ್ಳದೆ, ಈಗ ಹಳೆಯ ಶೇ.15ರ ಮೀಸಲಾತಿ ವಿಧಾನದಲ್ಲೇ ನೇಮಕಾತಿ ನಡೆಸಲು ಮುಂದಾಗಿದೆ. ಇದು ಪರಿಶಿಷ್ಟ ಜಾತಿಗಳಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇವೆ. ಕಳೆದ ವರ್ಷಗಳಲ್ಲಿ 40 ಸಾವಿರಕ್ಕೂ ಹೆಚ್ಚು ನೇಮಕಾತಿಗಳು ವರ್ಗೀಕರಣವಿಲ್ಲದೆ ನಡೆದಿವೆ. ಇತ್ತೀಚೆಗೆ ಸಚಿವ ಸಂಪುಟ 56,432 ಹುದ್ದೆಗಳ ನೇಮಕಾತಿಗೆ ತೀರ್ಮಾನಿಸಿರುವುದು ಚುನಾವಣೆ ದೃಷ್ಟಿಯಿಂದ ತೆಗೆದುಕೊಳ್ಳಲಾದ ತುರ್ತು ನಿರ್ಧಾರವಾಗಿದೆ ಎಂದು ಅವರು ಟೀಕಿಸಿದರು.
ಉದ್ಯೋಗ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಒಳಮೀಸಲಾತಿ ಜಾರಿಗೊಳಿಸಿ, ಕೋರ್ಟ್ಗೆ ಮನವರಿಕೆ ಮಾಡಿ ನೇಮಕಾತಿ ನಡೆಸಬೇಕು. ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಒಳಮೀಸಲಾತಿ ಜಾರಿಗೆ ಬದ್ಧತೆ ಎನ್ನುವುದು ಜನರನ್ನು ವಂಚಿಸುವ ರಾಜಕೀಯ ನಡೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ತೆಲಂಗಾಣ, ಆಂಧ್ರಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಒಳಮೀಸಲಾತಿ ಜಾರಿಗೆ ಮುಂದಾದವು. ಆದರೆ ಕರ್ನಾಟಕದಲ್ಲಿ ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗ ಸೇರಿದಂತೆ ಹಲವು ವರದಿಗಳನ್ನು ಜಾರಿಗೊಳಿಸಲು ಸರ್ಕಾರ ವಿಳಂಬ ಮಾಡಿದೆ ಎಂದು ದೂರಿದರು.
ಇದೇ ವೇಳೆ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಾದ SCP/TSP ಅನುದಾನದಲ್ಲಿ ಕಳೆದ ಮೂರು ವರ್ಷಗಳಲ್ಲಿ ₹38,870 ಕೋಟಿ ಹಣವನ್ನು ಇತರ ಉದ್ದೇಶಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪವನ್ನೂ ಮಾಡಿದರು.
ಒಳಮೀಸಲಾತಿ ವರ್ಗೀಕರಣದಂತೆ ಶೇ.17ರ ಮೀಸಲಾತಿ ಆಧಾರದಲ್ಲಿ ನೇಮಕಾತಿ ನಡೆಸಬೇಕು ಎಂದು ಒತ್ತಾಯಿಸಿದ ಅವರು, ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಮಟ್ಟದ ಮಹತ್ವದ ಸಭೆ ನಡೆಸಿ ಮುಂದಿನ ಹೋರಾಟದ ರೂಪರೇಷೆ ಪ್ರಕಟಿಸಲಾಗುವುದು ಎಂದರು. ಅಗತ್ಯವಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ, ಸಭಾ ಬಹಿಷ್ಕಾರ ಮತ್ತು ‘ಗೋಬ್ಯಾಕ್’ ಚಳುವಳಿಯನ್ನೂ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ನಲ್ಲಿ ನಡೆಯಿತು.
City Today News 9341997936

You must be logged in to post a comment.