ಕಂಠೀರವ ಸ್ಟುಡಿಯೋಸ್ ವಜ್ರಮಹೋತ್ಸವ ಆಚರಣೆ, ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವರಣಕ್ಕೆ ಆಗ್ರಹ

ಬೆಂಗಳೂರು, ಮಾ.16: ಬೆಂಗಳೂರಿನ ಕಂಠೀರವ ಸ್ಟುಡಿಯೋ ಸ್ಥಾಪನೆಯ ಪ್ರಮುಖ ರೂವರಿಯಾಗಿದ್ದ ತಿಪಟೂರಿನ ಕಲಾಕಂಠೀರವ ದಿವಂಗತ ಟಿ.ಎಸ್. ಕರಿಬಸಯ್ಯ ಅವರ ಸೇವೆ ಮತ್ತು ಕೊಡುಗೆಗಳನ್ನು ಕನ್ನಡ ಚಿತ್ರೋದ್ಯಮ ಸೂಕ್ತವಾಗಿ ಸ್ಮರಿಸಿಲ್ಲ ಎಂದು ಕಲಾಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟುಡಿಯೋ ಆವರಣದಲ್ಲಿ ಸಿದ್ಧವಾಗಿರುವ ಕರಿಬಸಯ್ಯ ಅವರ ಪುತ್ಥಳಿಯನ್ನು ಇದೇ ತಿಂಗಳ 18ರಂದು ಅನಾವರಣಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳ 18ರಂದು ಕಂಠೀರವ ಸ್ಟುಡಿಯೋ ಸ್ಥಾಪನೆಗೆ 60 ವರ್ಷಗಳು ಪೂರ್ಣಗೊಳ್ಳಲಿದ್ದು, ಅದನ್ನು ವಜ್ರಮಹೋತ್ಸವವಾಗಿ ಆಚರಿಸಬೇಕು ಎಂದರು. ಅದೇ ವೇಳೆ ಕರಿಬಸಯ್ಯ ಅವರಿಗೆ 115ನೇ ಜಯಂತಿಯೂ ಆಗುತ್ತಿರುವುದರಿಂದ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಹಾಗೂ ಕನ್ನಡ ಚಿತ್ರರಂಗವು ಸಮಗ್ರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಕಂಠೀರವ ಸ್ಟುಡಿಯೋ ಸ್ಥಾಪನೆ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಮಹತ್ವದ ತಿರುವು ನೀಡಿದ ಘಟನೆಯಾಗಿದೆ. 1966ರ ತನಕ ಕನ್ನಡ ಸಿನಿಮಾಗಳ ಚಿತ್ರಿಕರಣಕ್ಕಾಗಿ ಕಲಾವಿದರು ಮತ್ತು ತಾಂತ್ರಿಕರು ಮದರಾಸಿಗೆ ತೆರಳಬೇಕಾಗಿದ್ದ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಸುಸಜ್ಜಿತ ಸ್ಟುಡಿಯೋಗಳ ಕೊರತೆ ಇರುವುದನ್ನು ಮನಗಂಡ ಕರಿಬಸಯ್ಯ ಅವರು ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣ ಅವರೊಂದಿಗೆ ಸೇರಿ ಬೆಂಗಳೂರಿನಲ್ಲಿ ಕಂಠೀರವ ಸ್ಟುಡಿಯೋವನ್ನು ಸ್ಥಾಪಿಸಿದರು. ಇದರಿಂದ ಅನೇಕ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರಿಗೆ ಆಶ್ರಯ ದೊರಕಿತು ಎಂದು ಹೇಳಿದರು.
ರಂಗಭೂಮಿ ಮತ್ತು ಚಿತ್ರರಂಗದ ಅಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಕರಿಬಸಯ್ಯ ಅವರ ಕಲಾಸೇವೆ ಇಂದು ಮರೆತಿರುವಂತಾಗಿದೆ ಎಂದು ಅವರು ವಿಷಾದಿಸಿದರು. ಸ್ಟುಡಿಯೋ ಸರ್ಕಾರದ ಸುಪರ್ದಿಗೆ ಬಂದು ಹಲವು ವರ್ಷಗಳಾದರೂ ಅವರ ಸ್ಮರಣಾರ್ಥವಾಗಿ ಯಾವುದೇ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸಿಲ್ಲ ಎಂದು ಆರೋಪಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಶದಲ್ಲಿದ್ದು, ಕಂಠೀರವ ಸ್ಟುಡಿಯೋಸ್ ವಜ್ರಮಹೋತ್ಸವ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ಸಂಘಟನೆಗಳು ಒಗ್ಗೂಡಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ತಿಪಟೂರು ದಯಾನಂದ್ ಸಾಗರ್ ಮತ್ತು ಕನ್ನಡ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
City Today News 9341997936

You must be logged in to post a comment.