ಶ್ರೀ ಮಹಿಷಮರ್ಧಿನಿ ಹಾಗೂ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ ಸಮಾರಂಭ

ಶ್ರೀ ಮಹಿಷಮರ್ಧಿನಿ ಮತ್ತು ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಫೆಬ್ರವರಿ 28 ಮತ್ತು ಮಾರ್ಚ್ 1ರಂದು ನಡೆಯಲಿವೆ. ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ 1947ರ ವಿಶ್ವಾವಸು ನಾಮ ಸಂವತ್ಸರ, ಕುಂಭ ಮಾಸದ ಪಾಲ್ಗುಣ ಶುಕ್ಲ ದಿನದ ಪ್ರಯುಕ್ತ ಈ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಗಳು ಶ್ರೀ ಸೀತಾರಾಮ ಮುಚ್ಚಿಂತಾಯ ಮತ್ತು ಪ್ರವೀಣ್ ತಂತ್ರಿಗಳ ಆಚಾರ್ಯತ್ವದಲ್ಲಿ ಜರುಗಲಿವೆ.

ಫೆಬ್ರವರಿ 28ರಂದು ಸಂಜೆ 6 ಗಂಟೆಗೆ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಾಸ್ತು ಹೋಮ, ವಾಸ್ತು ಪೂಜೆ ಹಾಗೂ ರಾಕ್ಷೆಘ್ನ ಹೋಮ ಸೇರಿದಂತೆ ವಿವಿಧ ಪೂಜಾ ವಿಧಿಗಳು ನೆರವೇರಲಿವೆ. ಅದೇ ದಿನ ರಾತ್ರಿ 7.30ಕ್ಕೆ ಶ್ರೀ ವೆಂಕಟಸ್ವಾಮಿರೆಡ್ಡಿ ಅವರ ನೇತೃತ್ವದಲ್ಲಿ ಹರೇ ರಾಮ ಹರೇ ಕೃಷ್ಣ ಭಜನಾ ಹಾಗೂ ಕೋಲಾಟ ತಂಡದಿಂದ ಭಜನೆ–ಕೋಲಾಟ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ 1ರಂದು ಬೆಳಿಗ್ಗೆ 8.30ರಿಂದ ವಾರ್ಷಿಕೋತ್ಸವ ಪೂಜಾ ವಿಧಿಗಳು ಆರಂಭವಾಗಲಿದ್ದು, ಕಳಶಾಧಿವಾಸ ಹೋಮ, ಕಳಶಾಭಿಷೇಕ, ಚಂಡಿಕಾ ಹೋಮ, 11 ಕೈ ಪೂರ್ಣಾಹುತಿ, ಪ್ರಸನ್ನ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ರತ್ನಾಕರ ವೀರಗಾಸೆ ತಂಡದಿಂದ ವೀರಗಾಸೆ ಕುಣಿತ ಪ್ರದರ್ಶನ ಇರಲಿದೆ. ಸಂಜೆ 6ಕ್ಕೆ ನೆರಳೂರು ಶ್ರೀಪಾಲ ಮತ್ತು ತಂಡದಿಂದ ಜನಪದ ನಾಟಿ ಕೋಲಾಟ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ಕ್ಕೆ ಸಾಧನಾ ಡ್ಯಾನ್ಸ್ ಸೆಂಟರ್‌ನ ಭಾವನಾ ವೆಂಕಟೇಶ್ವರ ಹಾಗೂ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದ್ದು, ರಾತ್ರಿ 9ಕ್ಕೆ ಪ್ರವೀಣ್ ಬಡಿಗೇರ ಹಾಗೂ ಸಹನ ಬನ್ನಿಗಿಡದ ತಂಡದಿಂದ ‘ಶ್ರೀ ರೇಣುಕಾ ದೇವಿ ಮಹಾತ್ಮೆ’ ನೃತ್ಯ ರೂಪಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಮಧ್ಯಾಹ್ನ 2.30ಕ್ಕೆ ವಿವಿಧ ಧಾರ್ಮಿಕ ಗಣ್ಯರ ದಿವ್ಯ ಸಾನಿಧ್ಯದಲ್ಲಿ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು, ನಿಶ್ಚಲಾನಂದನಾಥ ಮಹಾಸ್ವಾಮಿಗಳು, ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಅಭಿನವ ಯಕ್ಷರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಪೀಠಾಧಿಪತಿಗಳು ಹಾಗೂ ಆಧ್ಯಾತ್ಮಿಕ ಗಣ್ಯರು ಭಾಗವಹಿಸಲಿದ್ದಾರೆ. ವಿದ್ವಾನ್ ಶ್ರೀಕಾಂತಾಚಾರ್ಯ ಬಾಯಲ, ಜ್ಯೋತಿಷ್ಯ–ವಾಸ್ತು ತಜ್ಞ ಉಮೇಶಾಚಾರ್ಯ ಹಾಗೂ ವಿವಿಧ ಮಠ–ಪೀಠಗಳ ಪ್ರತಿನಿಧಿಗಳು ಸಹ ಉಪಸ್ಥಿತರಿರುವರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಶಿವಣ್ಣ, ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಿ.ಸಿ. ತಮ್ಮಣ್ಣ, ವಿಪಕ್ಷ ನಾಯಕರು ಛಲವಾಧಿ ಟಿ. ನಾರಾಯಣಸ್ವಾಮಿ, ಆರ್.ಕೆ. ರಮೇಶ್ ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.
ಸಮಾರಂಭದ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

City Today News 9341997936