ಧ್ವನಿಯಿಲ್ಲದವರಿಗೆ ಧ್ವನಿಯಾದಾಗಲೇ ಸಾಹಿತ್ಯ ಸಾರ್ಥಕ – ಬಿ. ಸುರೇಶ್

ಬೆಂಗಳೂರು,ಏಪ್ರಿಲ್ 02, 2026:ಸಮಾಜದಲ್ಲಿ ಧ್ವನಿಯಿಲ್ಲದವರ ಪರವಾಗಿ ಮಾತಾಡುವಾಗಲೇ ಸಾಹಿತ್ಯದ ನಿಜವಾದ ಅರ್ಥ ಸಾರ್ಥಕವಾಗುತ್ತದೆ ಎಂದು ರಂಗಕರ್ಮಿ ಹಾಗೂ ನಿರ್ದೇಶಕ ಬಿ. ಸುರೇಶ್ ಅಭಿಪ್ರಾಯಪಟ್ಟರು.
ನಗರದ ವಿಜಯನಗರದಲ್ಲಿರುವ ಚಿದಾನಂದ ಮೂರ್ತಿ ಸಭಾಂಗಣದಲ್ಲಿ ಮುದ್ದಿ ಮೈಂಡ್ಸ್ ಆಯೋಜಿಸಿದ್ದ ಲೇಖಕ ಚಿದಾನಂದ ಮುದ್ದಿ ಅವರ ಚೊಚ್ಚಲ ಕಾದಂಬರಿ ‘ಸಪ್ತಕೋಟಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿನ ಅಸಮಾನತೆಗಳ ವಿರುದ್ಧ ಹೋರಾಡಲು ಬರವಣಿಗೆಯೇ ಅತ್ಯಂತ ಪ್ರಭಾವಿ ಅಸ್ತ್ರವಾಗಿದೆ ಎಂದು ಹೇಳಿದರು. ಕಾದಂಬರಿಯ ಮೂಲಕ ಸಮಾಜದ ಸೂಕ್ಷ್ಮ ಸಂಗತಿಗಳನ್ನು ತೆರೆದಿಡುವ ಮೂಲಕ ಚಿದಾನಂದ ಮುದ್ದಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ದೃಢ ಹೆಜ್ಜೆ ಇಟ್ಟಿದ್ದಾರೆ ಎಂದರು. ಇಂದಿನ ಯುವ ಪೀಳಿಗೆ ತಾವು ಕಂಡು ಅನುಭವಿಸುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಅಗತ್ಯ ಹೆಚ್ಚುತ್ತಿದೆ ಎಂದು ಅವರು ಸೂಚಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪತ್ರಕರ್ತ-ಬರಹಗಾರ ಜೋಗಿ, ಹೊಸ ಬರಹಗಾರರು ತಮ್ಮದೇ ವಿಶಿಷ್ಟ ಭಾಷಾ ಶೈಲಿಯನ್ನು ರೂಪಿಸಿಕೊಂಡು, ಸಾಹಿತ್ಯದಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು. ಹಳೆಯ ಚೌಕಟ್ಟನ್ನು ಮೀರಿದ ಸೃಜನಶೀಲ ಪ್ರಯತ್ನಗಳೇ ಸಾಹಿತ್ಯ ಸಮೃದ್ಧಿಗೆ ದಾರಿ ಮಾಡಿಕೊಡುತ್ತವೆ ಎಂದರು.
ಕಥೆಗಾರ್ತಿ ಪೂರ್ಣಿಮಾ ಮಾಳಗಿಮನಿ ಅವರು ‘ಸಪ್ತಕೋಟಿ’ ಕೃತಿಯನ್ನು ಪರಿಚಯಿಸಿ, ಯುವ ಓದುಗರಿಗೂ ಹೊಸ ಪೀಳಿಗೆಯ ಓದುಗರಿಗೂ ಆಕರ್ಷಕವಾಗಿರುವ ಕಾದಂಬರಿ ಇದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಗರಾಜ್ ಅರೆಹೊಳೆ, ಲೇಖಕ ಚಿದಾನಂದ ಮುದ್ದಿ ಉಪಸ್ಥಿತರಿದ್ದರು. ರವೀಂದ್ರ ಮುದ್ದಿ ಪ್ರಸ್ತಾವನೆ ಮಾಡಿದರು. ಮೈಥಲಿ ರಘುನಾಥ್ ಕಾರ್ಯಕ್ರಮವನ್ನು ನಿರೂಪಿಸಿದರು.
City Today News 9341997936

You must be logged in to post a comment.