
ಬೆಂಗಳೂರು, ಜೂನ್ 6, 2025 – ಕೋಟಕ್ ಮಹೀಂದ್ರಾ ಬ್ಯಾಂಕ್ನ ಹಿರಿಯ ನೌಕರ ಮತ್ತು ಸಿಬ್ಬಂದಿ ಒಕ್ಕೂಟದ ದೀರ್ಘಕಾಲೀನ ಸದಸ್ಯರಾದ ಸಿ. ರಾಮಾಚಾರಿ, ತಮ್ಮನ್ನು ಅನ್ಯಾಯವಾಗಿ ಒಕ್ಕೂಟದಿಂದ ಹೊರಗಾಕಲಾಗಿದೆ ಎಂಬ ಗಂಭೀರ ಆರೋಪವನ್ನು ಇಂದು ಬೆಂಗಳೂರಿನ ಪತ್ರಿಕಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೊರಹಾಕಿದರು.
28 ವರ್ಷಗಳಿಂದ ಬ್ಯಾಂಕ್ ಮತ್ತು ಒಕ್ಕೂಟದೊಂದಿಗೆ ಶ್ರಮಿಸಿದ್ದ ರಾಮಾಚಾರಿ, 2024ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ವಿಭಾಗೀಯ ಸಭೆಯ ಸಂದರ್ಭ ಉಪಸಿಬ್ಬಂದಿಗೆ ಬಡ್ತಿ ಕೋಟಾ ಕಡಿಮೆಯಾಗಿರುವುದು ಮತ್ತು ಅರೆಕಾಲಿಕ ನೌಕರರ ಬಡ್ತಿ ನೀತಿಯಲ್ಲಿ ಸ್ಪಷ್ಟತೆಯ ಕೊರತೆಯ ಬಗ್ಗೆ ಆತ ಮತ್ತು ಕೆಲ ಸಹೋದ್ಯೋಗಿಗಳು ಪ್ರಶ್ನೆ ಎತ್ತಿದ್ದರೆಂದು ವಿವರಿಸಿದರು.
ಇದೇ ಕುರಿತು 2024ರ ಏಪ್ರಿಲ್ 24 ಮತ್ತು ಸೆಪ್ಟೆಂಬರ್ 22 ರಂದು ಲಿಖಿತ ಮೇಲ್ಮನವಿಗಳನ್ನು ಒಕ್ಕೂಟದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದರೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಲಭ್ಯವಾಗಲಿಲ್ಲವೆಂದು ಅವರು ದೂರು ಹೇಳಿದರು.
“ಈ ಸಮಸ್ಯೆಗಳನ್ನು ಸದಸ್ಯರೊಂದಿಗೆ ಚರ್ಚಿಸಿದ ಕಾರಣಕ್ಕೆ ನನಗೆ ‘ಒಕ್ಕೂಟ ವಿರೋಧಿ ಚಟುವಟಿಕೆ’ ಎಂಬ ನೋಟಿಸ್ ನೀಡಲಾಯಿತು,” ಎಂದ ಅವರು, “35 ರಿಂದ 40 ಸದಸ್ಯರು ಈ ಬಗ್ಗೆ ಸಹಿ ಹಾಕಿದ್ದರೂ ಕ್ರಮ ನನ್ನ ಮೇಲೆ ಮಾತ್ರವೇ ತೆಗೆದುಕೊಳ್ಳಲಾಗಿದೆ” ಎಂಬ ಆಕ್ಷೇಪವನ್ನು ವ್ಯಕ್ತಪಡಿಸಿದರು.
ತಮ್ಮ ಉಚ್ಚಾಟನೆ ಏಕಪಕ್ಷೀಯವಾಗಿದ್ದು, ಯಾವುದೇ ನಿಷ್ಪಕ್ಷಪಾತ ತನಿಖೆ ಅಥವಾ ಸ್ಪಷ್ಟ ವಿಚಾರಣೆ ಇಲ್ಲದೆ ಸದಸ್ಯತ್ವ ರದ್ದುಪಡಿಸಲಾಗಿದೆ ಎಂದು ಅವರು ಆರೋಪಿಸಿದರು. ನೋಟಿಸ್ಗೆ ಉತ್ತರ ನೀಡಿದರೂ ಸಹ ಯಾವುದೇ ಪರಿಶೀಲನೆ ನಡೆಸಲಾಗಿಲ್ಲ ಎಂದು ಹೇಳಿದರು.
ಭಾಷಾತ್ಮಕ ಭೇದಭಾವದ ದೃಷ್ಠಾಂತವನ್ನೂ ಅವರು ನೀಡಿದರು. ಇಂಗ್ಲಿಷ್ನಲ್ಲಿ ಪ್ರಾವೀಣ್ಯ ಕಡಿಮೆ ಇರುವುದರಿಂದ ನೋಟಿಸ್ ಅನ್ನು ಕನ್ನಡದಲ್ಲಿ ನೀಡಬೇಕೆಂದು ವಿನಂತಿಸಿದ್ದರೂ, ಅದನ್ನು ನಿರ್ಲಕ್ಷಿಸಲಾಗಿದೆ ಎಂದರು. “ಒಕ್ಕೂಟದ ಕಚೇರಿ ಬೆಂಗಳೂರಿನಲ್ಲಿ ಇದ್ದು ಕನ್ನಡ ರಾಜ್ಯಭಾಷೆಯಾದರೂ ಸಹ, ಕನ್ನಡವನ್ನು ಕಡೆಗಣಿಸಲಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಮಾಚಾರಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತಿಂಗಳಿಗೆ ರೂ. 50,000 ರಿಂದ ₹60,000ವರೆಗೆ ಗೌರವಧನ ಪಡೆಯುತ್ತಿದ್ದಾರೆಂದು ಆರೋಪಿಸಿ, “ಆದರೂ ಅವರು ತಳಮಟ್ಟದ ನೌಕರರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯವನ್ನೇ ತೋರಿಸುತ್ತಿದ್ದಾರೆ” ಎಂದರು.
“ನಾವು ಒಕ್ಕೂಟ ವಿರೋಧಿಗಳು ಅಲ್ಲ. ನಾವು ನ್ಯಾಯ, ಪಾರದರ್ಶಕತೆ ಮತ್ತು ಸಮಾನತೆಯ ಹಕ್ಕಿಗಾಗಿ ಹೋರಾಡುತ್ತಿದ್ದೇವೆ. ಒಕ್ಕೂಟವು ತನ್ನ ಸದಸ್ಯರ ಧ್ವನಿಯಾಗಿ ನಿಲ್ಲಬೇಕು — ಅವರನ್ನು ಮೌನಗೊಳಿಸುವುದಿಲ್ಲ,” ಎಂದು ರಾಮಾಚಾರಿ ಹೇಳಿದರು.
ಡಿಸೆಂಬರ್ 11ರಂದು ಹೈದ್ರಾಬಾದ್ನಲ್ಲಿ ನಡೆಯಲಿರುವ ಒಕ್ಕೂಟದ ಚುನಾವಣೆಯಲ್ಲಿ ನೈತಿಕ ನಾಯಕತ್ವಕ್ಕೆ ಬೆಂಬಲ ನೀಡಬೇಕು ಎಂದು ನೌಕರರಿಗೆ ಕರೆ ನೀಡಿದ ಅವರು, ತಮ್ಮ ಸದಸ್ಯತ್ವವನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದರು. ಈ ಕ್ರಮವನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕೆಂಬ ಬೇಡಿಕೆಯನ್ನು ರಾಮಾಚಾರಿ ಅಂತಿಮವಾಗಿ ವ್ಯಕ್ತಪಡಿಸಿದರು.
“ಒಕ್ಕೂಟವು ಎಲ್ಲಾ ನೌಕರರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂಬ ಆಶಯದೊಂದಿಗೆ ನಾನು ಮತ್ತು ನನ್ನ ಬೆಂಬಾಲಕರು ಶಾಂತಿಯುತ ಹೋರಾಟ ಮುಂದುವರಿಸುತ್ತೇವೆ,” ಎಂದು ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
City Today News 9341997936

You must be logged in to post a comment.