
ಬೆಂಗಳೂರು, ಮಾರ್ಚ್ 3:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಟುಂಬಗಳ ಬದುಕಿನೊಂದಿಗೆ ಆಟವಾಡಲಾಗುತ್ತಿದೆ ಎಂದು ಆರೋಪಿಸಿ, PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ (ರಿ) ವತಿಯಿಂದ ಇಂದು ನಗರದ Press Club of Bangaloreನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಸಮಿತಿಯ ರಾಜ್ಯಾಧ್ಯಕ್ಷರಾದ ಪಿ.ಟಿ.ಸಿ.ಎಲ್. ಮಂಜುನಾಥ ಅವರು ಮಾತನಾಡಿ, ಸರ್ಕಾರದ PTCL ಕಾಯ್ದೆ ತಿದ್ದುಪಡಿಯ ನಂತರವೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಲಕ್ಷಾಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರಿದರು. ಬದುಕು ಕಟ್ಟಿಕೊಳ್ಳಲು ಸರ್ಕಾರ ಮಂಜೂರು ಮಾಡಿದ್ದ ಜಮೀನುಗಳನ್ನು ಕಾನೂನುಬಾಹಿರವಾಗಿ, ನಯವಂಚನೆಯ ಮೂಲಕ ಕಬಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು-ಎಸಿ, ಡಿಸಿ ಸೇರಿದಂತೆ-ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ರಕ್ಷಿಸಬೇಕಾದ ನ್ಯಾಯಾಂಗದಲ್ಲಿಯೂ ಕಾಲಮಿತಿಯ ಆಧಾರದ ಮೇಲೆ ಅನ್ಯಾಯವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ರಾಜ್ಯ ಸರ್ಕಾರ ಮೂರು ವರ್ಷ ಕಳೆದರೂ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಸರ್ಕಾರಕ್ಕೆ ಕೊನೆಯ ಅವಕಾಶವಾಗಿ 10 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಸಮಸ್ಯೆಗೆ ಸಮಗ್ರ ಪರಿಹಾರ ಕೈಗೊಳ್ಳದಿದ್ದರೆ, ರಾಜ್ಯದ ಭೂಮಿ ಕಳೆದುಕೊಂಡ ಬಾಧಿತರು ಹಾಗೂ ಹಿರಿಯ ಹೋರಾಟಗಾರರ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖ ಬೇಡಿಕೆಗಳು:
PTCL ಕಾಯ್ದೆ ತಿದ್ದುಪಡಿ ಜಾರಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಂದ ನಡೆಯುತ್ತಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು. ನ್ಯಾಯಾಲಯಗಳಲ್ಲಿ ಕಾಲಮಿತಿಯಿಂದ ಉಂಟಾಗುತ್ತಿರುವ ಅನ್ಯಾಯವನ್ನು ನಿವಾರಿಸಬೇಕು.
2023ರ ತಿದ್ದುಪಡಿ ಬಳಿಕ ಉಂಟಾದ ಗೊಂದಲಗಳನ್ನು ಸ್ಪಷ್ಟಪಡಿಸಿ, ಪೀಡಿತರಿಗೆ ನ್ಯಾಯ ಒದಗಿಸಬೇಕು.
PTCL ಕಾಯ್ದೆಯ ಕಲಂ 3(1)(ಬಿ) ವ್ಯಾಪ್ತಿಯಲ್ಲಿ ಬರುವ ವಿವಿಧ ರೀತಿ ಇನಾಂ ಭೂಮಿಗಳು (ತೋಟಿ ನೌಕರ ಇನಾಂ, ನಿರಗಂಟಿ, ತಳವಾರಿ, ಕುಲವಾಡಿಕೆ), ಕಿಮ್ಮತ್ತು, ಜಿಎಂಎಫ್, ಭೂ ಸುಧಾರಣೆ ಕಾಯ್ದೆಯಡಿ ಮಂಜೂರಾದ ಭೂಮಿಗಳು, ಪ್ರತಿಕೂಲ ಸ್ವಾಧೀನ ಹಾಗೂ ಸರ್ಕಾರದಿಂದ ಮಂಜೂರಾದ ಎಲ್ಲಾ ವಿಧದ ಭೂಮಿಗಳು ಒಳಪಡುವಂತೆ ಸ್ಪಷ್ಟಪಡಿಸಬೇಕು; ಅಗತ್ಯವಿದ್ದರೆ ತಿದ್ದುಪಡಿ ಮಾಡಬೇಕು.
2023ರ ತಿದ್ದುಪಡಿ ಕಾಯ್ದೆಯನ್ನು ದುರ್ಬಳಕೆ ಮಾಡುತ್ತಿರುವ ಡಿಸಿ, ಎಸಿ, ತಹಶೀಲ್ದಾರ್, ಆರ್ಐ, ವಿಎ ಸೇರಿದಂತೆ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಂಜೂರಾತಿ ದಾಖಲೆಗಳನ್ನು ಸಂರಕ್ಷಿಸಿ ಸೂಕ್ತ ಕ್ರಮ ಜರುಗಿಸಬೇಕು.
ಸರ್ಕಾರದ ಪರ ವಾದಿಸುವ ಅಭಿಯೋಜಕರ ಬೇಜವಾಬ್ದಾರಿಯಿಂದ ಸಂವಿಧಾನ ಮತ್ತು ಕಾಯ್ದೆಗಳ ವಿರುದ್ಧ ಆದೇಶಗಳು ಹೊರಬರುತ್ತಿವೆ. ಇಂತಹ ಅಧಿಕಾರಿಗಳನ್ನು ವಜಾಗೊಳಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯವನ್ನು ರಕ್ಷಿಸುವ ಹೊಣೆ ಸಮಾಜ ಕಲ್ಯಾಣ ಇಲಾಖೆಯ ಮೇಲಿದೆ. ಇಲಾಖೆಯ ವತಿಯಿಂದ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಮೇಲ್ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕು.
ಈ ಆರು ಬೇಡಿಕೆಗಳೇ ಹೋರಾಟದ ಮುಖ್ಯ ಉದ್ದೇಶಗಳಾಗಿವೆ ಎಂದು ಮಂಜುನಾಥ ಅವರು ಸ್ಪಷ್ಟಪಡಿಸಿದರು.
City Today News 9341997936

You must be logged in to post a comment.