
ನವದೆಹಲಿ : ಕರ್ನಾಟಕ ವಾರ್ತೆ :: ಕಾವೇರಿ ನದಿಯ ಮೇಕೆದಾಟು ಯೋಜನೆ ಸಂಬಂಧಪಟ್ಟಂತೆ ಕರ್ನಾಟಕದ ಸಂಸದರ ಸಭೆಯನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರ ನೇತೃತ್ವದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಡೆಸಿದರು.
ಸಚಿವ ಡಿ.ವಿ.ಸದಾನಂದ ಗೌಡ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆಯ ರೂಪರೇಷೆಯ ಬಗ್ಗೆ ವಿಸ್ತ್ರುತವಾಗಿ ಮಾಹಿತಿ ನೀಡಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಈ ಯೋಜನೆ ದೇಶದಲ್ಲೆ ಅತ್ಯಂತ ಕಡಿಮೆ ವೆಚ್ಚ ಮತ್ತು ಕಡಿಮೆ ಜನವಸತಿ ಪ್ರದೇಶ ಮುಳಗಡೆಯಾಗುವ ಯೋಜನೆಯಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಬೆಂಗಳೂರಿಗೆ ಕುಡಿಯುವ ನೀರು ಮತ್ತು ಜಲವಿದ್ಯುತ್ ಮಾತ್ರ ಲಭ್ಯವಾಗಲಿದೆ, ಕರ್ನಾಟಕದ ವ್ಯವಸಾಯದ ಒಂದು ಎಕರೆ ಪ್ರದೇಶಕ್ಕೂ ನೀರು ಲಭ್ಯವಾಗುವುದಿಲ್ಲ, ಕರ್ನಾಟಕ ಸಿದ್ದಪಡಿಸಿರುವ ವಿಸ್ತ್ರುತ ಯೋಜನಾ ವರದಿಯಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಿದೆ.

ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಈ ಆಧಾರದ ಮೇಲೆಯ ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಿದೆ,ಕೇವಲ ರಾಜಕೀಯ ಕಾರಣಕ್ಕೆ ತಮಿಳುನಾಡು ಸರ್ಕಾರ ಮತ್ತು ತಮಿಳುನಾಡಿನ ಸಂಸದರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಯೋಜನೆಯ ಸಂಪೂರ್ಣ ವಾಸ್ತು ಚಿತ್ರಣವನ್ನು ಸಂಸದರಿಗೆ ವಿವರಿಸಿದರು. ಹಾಗೂ ಸಂಸತಿನಲ್ಲಿ ಈ ಯೋಜನೆಯ ಅನುಷ್ಟಾನ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು ಸಂಸದರಿಗೆ ರಾಜ್ಯದ ಸಂಸದರು ವಾಸ್ತವ ಚಿತ್ರಣವನ್ನು ಒಗ್ಗಟ್ಟಿನಿಂದ ಸಂಸತ್ತಿನಲ್ಲಿ ಉತ್ತರ ನೀಡಬೇಕೆಂದು ಮನವಿ ಮಾಡಿದರು.
ಬಳಿಕ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ರಾಜ್ಯದ ಜಲ-ನೆಲ-ಭಾಷೆ -ವಿಚಾರದಲ್ಲಿ ರಾಜ್ಯದ ಸಂಸದರೆಲ್ಲಾ ಈ ಹಿಂದೆಯೂ ಪಕ್ಷಬೇದ ಮರೆತು ಸಂಸತ್ತಿನಲ್ಲಿ ಹೋರಾಟ ಮಾಡಿದ್ದೇವೆ. ಈ ಯೋಜನೆಯ ಅನುಷ್ಠಾನಕ್ಕೂ ಸಹ ನಾವೆಲ್ಲಾ ಶ್ರಮಿಸಲಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಈ ವಿಚಾರವಾಗಿ ಮೊದಲ ಹಂತದಲ್ಲಿ ಈ ತಿಂಗಳ 27 ರಂದು ( ಗುರುವಾರ) ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಸಂಸದರೆಲ್ಲಾ ಒಗ್ಗಟ್ಟಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆ : ನವದೆಹಲಿಯಲ್ಲಿ ರಾಜ್ಯದ ಸಂಸದರ ಸಭೆ

ಈ ವೇಳೆ ಮಹದಾಯಿ ನದಿ ನೀರು ಹಂಚಿಕೆ ವಿಚಾರದ ಮುಂದಿನ ಹೋರಾಟದ ಬಗ್ಗೆ ಸಂಸದರು ಚರ್ಚಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್, ಕೇಂದ್ರ ಮಂತ್ರಿಗಳಾದ ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಲೋಕಸಭೆಯ ಕಾಂಗ್ರೆಸ್ ನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಜಿ.ಎಂ.ಸಿದ್ದೇಶ್ವರ್, ಕೆ.ಹೆಚ್.ಮುನಿಯಪ್ಪ, ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಸಂಗಣ್ಣ ಕರಡಿ, ವಿ.ಎಸ್.ಉಗ್ರಪ್ಪ,ಚಂದ್ರಪ್ಪ, ಡಿ.ಕೆ.ಸುರೇಶ್, ಮುದ್ದುಹನುಮೇಗೌಡ, ಧ್ರುವನಾರಾಯಣ್, ಬಿ.ವೈ.ರಾಘವೇಂದ್ರ, ಬಿ.ಕೆ.ಹರಿಪ್ರಸಾದ್, ನಳಿನ್ ಕುಮಾರ್ ಕಟೀಲ್, ಎಲ್.ಆರ್.ಶಿವರಾಮೇಗೌಡ, ಭಗವಂತ ಖೂಭಾ, ಗದ್ದಿಗೌಡರ್,ರಾಜೀವ್ ಚಂದ್ರಶೇಖರ್, ಪ್ರಭಾಕರ್ ಕೋರೆ, ಕೆ.ಸಿ. ರಾಮಮೂರ್ತಿ, ಚಂದ್ರಶೇಖರ್, ರಾಜೀವ್ ಗೌಡ, ಕುಪೇಂದ್ರ ರೆಡ್ಡಿ, ಡಾ.ಎಲ್.ಹನುಮಂತಯ್ಯ, ನಾಸಿರ್ ಹುಸೇನ್ ಉಪಸ್ಥಿತರಿದ್ದರು.
City Today News
(Tj vision media)
9341997936
