ತನ್ನ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದಲೇ ಪ್ರತೀ ನಿತ್ಯ 250 ಕಿಲೋ ವ್ಯಾಟ್ ವಿದ್ಯುತ್ ಚ್ಛಕ್ತಿಯನ್ನು ಉತ್ಪಾದಿಸುವಂತಹ “ಭಾರತ ದೇಶದ ಪ್ರಪ್ರಥಮ ವಾರ್ಡ್” ಎಂಬ ಖ್ಯಾತಿಗೆ “ಯಡಿಯೂರು ವಾರ್ಡ್” ಪಾತ್ರವಾಗಿದೆ.

“250 KW ವಿದ್ಯುತ್ ಉತ್ಪಾದಿಸುವ ಯಡಿಯೂರು ಜೈವಿಕ ಅನಿಲ ಘಟಕದ ಉದ್ಘಾಟನೆ”ತನ್ನ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯದಿಂದಲೇ ಪ್ರತೀ ನಿತ್ಯ 250 ಕಿಲೋ ವ್ಯಾಟ್ ವಿದ್ಯುತ್ ಚ್ಛಕ್ತಿಯನ್ನು ಉತ್ಪಾದಿಸುವಂತಹ “ಭಾರತ ದೇಶದ ಪ್ರಪ್ರಥಮ ವಾರ್ಡ್” ಎಂಬ ಖ್ಯಾತಿಗೆ “ಯಡಿಯೂರು ವಾರ್ಡ್” ಪಾತ್ರವಾಗಿದೆ.
BESCOM ಸಂಸ್ಥೆಯು ಪೂರೈಸುವ ವಿದ್ಯುತ್ ಚ್ಛಕ್ತಿಯಿಂದ “ಸಂಪೂರ್ಣ ಮುಕ್ತ”ವಾಗಿ, “ವಿದ್ಯುತ್ ಚ್ಛಕ್ತಿ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದ ದೇಶದ ಮೊದಲ ವಾರ್ಡ್” ಎಂಬ ಹೆಮ್ಮೆಗೆ ಭಾಜನವಾಗಿರುವ “ಯಡಿಯೂರು ವಾರ್ಡ್” ನಲ್ಲಿ ಪ್ರತೀ ನಿತ್ಯ 05 ಟನ್ ಗಳಷ್ಟು ಹಸಿ ತ್ಯಾಜ್ಯ ಸಂಗ್ರಹವಾಗುತ್ತಿದ್ದು, “ಯಡಿಯೂರು ಜೈವಿಕ ಅನಿಲ ಘಟಕ” ದಲ್ಲಿ ಪ್ರತೀ ನಿತ್ಯ 50 KW ಗಳಷ್ಟು ವಿದ್ಯುತ್ ಚ್ಛಕ್ತಿಯನ್ನು ಕಳೆದ ಮೂರು ವರ್ಷಗಳಿಂದ ಉತ್ಪಾದಿಸಲಾಗುತ್ತಿತ್ತು.

ಈ 50 KW ವಿದ್ಯುತ್ ಚ್ಛಕ್ತಿಯಿಂದ ಯಡಿಯೂರು ವಾರ್ಡ್ ನಲ್ಲಿರುವ ಕೆಲವು ಉದ್ಯಾನವನಗಳ ಅಲಂಕಾರಿಕ ದೀಪಗಳನ್ನು ಬೆಳಗಿಸಲಾಗುತ್ತಿತ್ತು.
ಪ್ರತೀ ನಿತ್ಯ 50 KW ವಿದ್ಯುತ್ ಚ್ಛಕ್ತಿಯನ್ನು ಉತ್ಪಾದಿಸಲಾಗುತ್ತಿದ್ದ “ಯಡಿಯೂರು ಜೈವಿಕ ಅನಿಲ ಘಟಕ” ವನ್ನು 250 KW ವಿದ್ಯುತ್ ಚ್ಛಕ್ತಿಯನ್ನು ಉತ್ಪಾದಿಸುವ ಘಟಕವನ್ನಾಗಿ ಇದೀಗ ವಿಸ್ತರಿಸಲಾಗಿದೆ.
ಈ ಘಟಕದಲ್ಲಿ ಸ್ಥಾಪಿಸಲಾಗಿರುವ ಜನರೇಟರ್ ಗೆ ಸಂಬಂಧಿಸಿದಂತೆ, ಜೈವಿಕ ಅನಿಲದ ಮೂಲಕ ವಿದ್ಯುತ್ ಉತ್ಪಾದಿಸುವ ಅತಿ ಹೆಚ್ಚು ಸಾಮರ್ಥ್ಯದ ದೇಶದ ಪ್ರಪ್ರಥಮ ಜನರೇಟರ್ ಇದಾಗಿರುವುದು ಮತ್ತೊಂದು ವೈಶಿಷ್ಟ್ಯ.

ಪ್ರಸ್ತುತ ಪ್ರತೀ ದಿನ ಉತ್ಪಾದಿಸಲಾಗುವ 250 KW ವಿದ್ಯುತ್ ಚ್ಛಕ್ತಿಯ ಪೈಕಿ 150 KW ವಿದ್ಯುತ್ ಚ್ಛಕ್ತಿಯನ್ನು ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿರುವ 17 ಪಾಲಿಕೆ ಕಟ್ಟಡಗಳು, 13 ಉದ್ಯಾನವನಗಳು, ಮತ್ತು 03 ಕಿ. ಮೀ. ಉದ್ದದ ಮಾದರಿ ಪಾದಚಾರಿ ಮಾರ್ಗಗಳಲ್ಲಿರುವ ವಿದ್ಯುತ್ ದೀಪಗಳನ್ನು ಬೆಳಗಿಸಲು ಬಳಸಲಾಗುತ್ತದೆ. ಇದರಿಂದಾಗಿ ಪಾಲಿಕೆಯು BESCOM ಸಂಸ್ಥೆಗೆ ಪ್ರತೀ ತಿಂಗಳು ಪಾವತಿಸುತ್ತಿರುವ 09 ಲಕ್ಷ ರೂಪಾಯಿಗಳಷ್ಟು ವಿದ್ಯುತ್ ಶುಲ್ಕದ ಹಣ ಸಂಪೂರ್ಣವಾಗಿ ಉಳಿತಾಯವಾಗಲಿದೆ.
ಅಲ್ಲದೇ, ಇನ್ನುಳಿದ 100 KW ವಿದ್ಯುತ್ ಚ್ಛಕ್ತಿಯನ್ನು BESCOM ಸಂಸ್ಥೆಗೆ ಮಾರಾಟ ಮಾಡುವುದರಿಂದ ಪ್ರತೀ ತಿಂಗಳು 06 ಲಕ್ಷ ರೂಪಾಯಿಗಳಷ್ಟು ಹಣ ಪಾಲಿಕೆಗೆ ಲಭಿಸಲಿದೆ.

ಇದಲ್ಲದೇ “ಯಡಿಯೂರು ಜೈವಿಕ ಅನಿಲ ಘಟಕ” ದಲ್ಲಿ ಹಸಿತ್ಯಾಜ್ಯ ಸಂಸ್ಕರಣೆಯಿಂದ ಪ್ರತೀ ನಿತ್ಯ ಸುಮಾರು 2,000 ಲೀಟರ್ ಗಳಷ್ಟು ಪ್ರಮಾಣದ “ತ್ಯಾಜ್ಯ ದ್ರಾವಣ” ಉತ್ಪತ್ತಿಯಾಗುತ್ತಿದೆ. “ಅತ್ಯಂತ ಸಮೃದ್ಧವಾದ ಸಾವಯವ ಗೊಬ್ಬರ” ವಾಗಿರುವ ಈ “ತ್ಯಾಜ್ಯ ದ್ರಾವಣ” ವನ್ನು ಪಾಲಿಕೆಯ ದಕ್ಷಿಣ ವಲಯದ ವ್ಯಾಪ್ತಿಯಲ್ಲಿರುವ 270 ಉದ್ಯಾನವನಗಳಲ್ಲಿರುವ ಗಿಡ – ಮರಗಳಿಗೆ ಪೂರೈಸಲು ನಿರ್ಧರಿಸಿರುವುದರಿಂದ, ಈ ಉದ್ಯಾನವನಗಳಿಗೆ ಪೂರೈಕೆಯಾಗುತ್ತಿದ್ದ “ರಾಸಾಯನಿಕ ಗೊಬ್ಬರ” ಗಳಿಗೆಂದು ಪ್ರತೀ ತಿಂಗಳು ವೆಚ್ಛ ಮಾಡಲಾಗುತ್ತಿರುವ ಸುಮಾರು 04 ಲಕ್ಷ ರೂಪಾಯಿಗಳಷ್ಟು ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತದೆಯಲ್ಲದೇ, “ತ್ಯಾಜ್ಯ ದ್ರಾವಣ”ದ ರೂಪದಲ್ಲಿರುವ ಸಾವಯವ ಗೊಬ್ಬರದ ಬಳಕೆಯಿಂದಾಗಿ ಆ ಉದ್ಯಾನವನಗಳ ಭೂಮಿಯು ಅತ್ಯಂತ ಫಲವತ್ತಾದ ಭೂಮಿಯಾಗಿ ಪರಿವರ್ತನೆಯಾಗುತ್ತದೆ ಹಾಗೂ ಗಿಡ – ಮರಗಳು ಆರೋಗ್ಯಪೂರ್ಣವಾಗಿ / ಸಮೃದ್ಧವಾಗಿ ಬೆಳೆಯುತ್ತವೆ.
ವಾರ್ಡ್ ನಲ್ಲಿ ಪ್ರತೀ ನಿತ್ಯ ಸಂಗ್ರಹವಾಗುವ 05 ಟನ್ ಗಳಷ್ಟು ಹಸಿ ತ್ಯಾಜ್ಯವನ್ನು “ಬೆಳ್ಳಳ್ಳಿ ಕ್ವಾರಿ” ಗೆ ಸಾಗಿಸಲು ಪ್ರತೀ ತಿಂಗಳು ಪಾಲಿಕೆಯು ವೆಚ್ಛ ಮಾಡುತ್ತಿದ್ದ 4.5 ಲಕ್ಷ ಹಣ ಸಂಪೂರ್ಣ ಉಳಿತಾಯವಾಗುತ್ತಿದೆ.
ಈ ರೀತಿ 250 KW ವಿದ್ಯುತ್ ಚ್ಛಕ್ತಿ ಉತ್ಪಾದಿಸುವ ಕೇಂದ್ರವಾಗಿ ವಿಸ್ತರಿಸಲ್ಪಟ್ಟಿರುವ “ಯಡಿಯೂರು ಜೈವಿಕ ಅನಿಲ ಘಟಕ” ದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರತೀ ತಿಂಗಳೂ ಕನಿಷ್ಟ 25 ಲಕ್ಷ ರೂಪಾಯಿಗಳಷ್ಟು ಹಣ ಲಭಿಸಲಿದೆ.

“ಕಸದಿಂದ ವಿದ್ಯುತ್ ಚ್ಛಕ್ತಿ” ಯನ್ನು ಉತ್ಪಾದಿಸುವ “ಯಡಿಯೂರು ಜೈವಿಕ ಅನಿಲ ಘಟಕ”ದ 150 KW ವಿದ್ಯುತ್ ಚ್ಛಕ್ತಿಯಿಂದ ಪ್ರತೀ ನಿತ್ಯ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿರುವ ಯಡಿಯೂರು ಸಮುದಾಯ ಭವನ, ಸುಶ್ರುತ ಡಯಾಲಿಸಿಸ್ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಹೊಲಿಗೆ ತರಬೇತಿ ಕೇಂದ್ರ, ಡಾ|| ರಾಜ್ ಕುಮಾರ್ ರಂಗಮಂದಿರ, ಮಹಿಳಾ ಮಂಡಳಿ, ಗ್ರಂಥಾಲಯ, ಅಂಗನವಾಡಿ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರ ಸೇರಿದಂತೆ 17 ಪಾಲಿಕೆಯ ಕಟ್ಟಡಗಳು ಹಾಗೂ ರಣಧೀರ ಕಂಠೀರವ ಉದ್ಯಾನವನ, ನವತಾರೆ ಬ್ಯಾಡ್ಮಿಂಟನ್ ಅಕಾಡೆಮಿ ಉದ್ಯಾನ, ಚಂದವಳ್ಳಿಯ ತೋಟ, ಸಂಜೀವಿನಿ ವನ, ಧನ್ವಂತರಿ ವನ, ಅಂಬೇಡ್ಕರ್ ಉದ್ಯಾನವನ, ಚೈತನ್ಯ ಉದ್ಯಾನವನ, ಅಂಬರ ಚುಂಬನ ಗಡಿಯಾರ ಗೋಪುರ, ಪಟಾಲಮ್ಮ ಉದ್ಯಾನವನ ಸೇರಿದಂತೆ 13 ಉದ್ಯಾನವನಗಳು ಹಾಗೂ 03 ಕಿ. ಮೀ. ಉದ್ದದ ಮಾದರಿ ಪಾದಚಾರಿ ಮಾರ್ಗಗಳಲ್ಲಿರುವ ಎಲ್ಲಾ ವಿದ್ಯುತ್ ದೀಪಗಳನ್ನು ಬೆಳಗಿಸಲಾಗುತ್ತದೆ.
“ಯಡಿಯೂರು ಜೈವಿಕ ಅನಿಲ ಘಟಕ” ವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ “ಅಭೂತಪೂರ್ವ ಸಾಧನೆ” ಮಾಡುವ ಮೂಲಕ ಒಂದು ಮೈಲಿಗಲ್ಲನ್ನು ಸ್ಥಾಪಿಸಿದೆ.

“ಯಡಿಯೂರು ಜೈವಿಕ ಅನಿಲ ಘಟಕ” ದ ಉದ್ಘಾಟನೆಯನ್ನು ಪೂಜ್ಯ ಮಹಾಪೌರರಾದ ಶ್ರೀಮತಿ. ಗಂಗಾಂಬಿಕೆ ಮಲ್ಲಿಕಾರ್ಜುನ ರವರು, ಮಾಜಿ ಉಪ ಮುಖ್ಯಮಂತ್ರಿ R.ಅಶೋಕ್ ರವರು, ಉಪ ಮಹಾಪೌರರಾದ ಭದ್ರೇ ಗೌಡ , ಪಾಲಿಕೆಯ ಆಯುಕ್ತರಾದ ಮಂಜುನಾಥ ಪ್ರಸಾದ್, ಜಂಟಿ ಆಯುಕ್ತರಾದ ವಿಶ್ವನಾಥ್, ಸರ್ಫರಾಜ್ ಖಾನ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರಾದ ಪೂರ್ಣಿಮಾ ರಮೇಶ್ ರವರು ನೆರವೇರಿಸಿದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.