
ಪಠ್ಯಪುಸ್ತಕ ಮರು ಪರಿಷ್ಕರಣೆ ಕುರಿತಂತೆ ವಿವಾದ ಉಂಟಾದಾಗ ಹಿಂದಿನ ಪರಿಷ್ಕರಣೆ ಕುರಿತು ರೋಹಿತ್ ಚಕ್ರತೀರ್ಥ ಮತ್ತು ಶಿಕ್ಷಣ ಸಚಿವರು ವಿತಂಡವಾದ ಮಾಡುತ್ತಿದ್ದಾರೆ .
ಹಿಂದೆ ಬರಗೂರರೊಬ್ಬರೇ ಪರಿಷ್ಕರಣೆ ಮಾಡಿರಲಿಲ್ಲ . ಒಂದೇ ಸಮಿತಿಯೂ ಪರಿಷ್ಕರಣೆ ಮಾಡಿರಲಿಲ್ಲ . ಒಟ್ಟು 27 ಸಮಿತಿಗಳಿದ್ದವು . ಒಂದೊಂದು ಪಠ್ಯಪುಸ್ತಕಕ್ಕೂ ಕಡೇ ಪಕ್ಷ ಎರಡು ಸಮಿತಿಗಳನ್ನು ರಚಿಸಲಾಗಿತ್ತು . ಪ್ರತಿ ಸಮಿತಿಗೂ ಒಬ್ಬೊಬ್ಬ ಅಧ್ಯಕ್ಷರಿದ್ದರು . ಒಟ್ಟು 170 ಕ್ಕೂ ಹೆಚ್ಚು ಸದಸ್ಯರಿದ್ದರು . ಬರಗೂರರು ಎಲ್ಲಾ ಸಮಿತಿಗಳ ಸರ್ವಾಧ್ಯಕ್ಷರಾಗಿದ್ದರು . ಮುಖ್ಯವಾದ ಸಂಗತಿಯೆಂದರೆ ಈ 27 ಸಮಿತಿಗಳಲ್ಲಿ ವಿಷಯ ತಜ್ಞರು , ಅಧ್ಯಾಪಕರು ಮತ್ತು ಸರ್ವ ಸಾಮಾಜಿಕ ಸಮುದಾಯಕ್ಕೆ ಸೇರಿದವರು ಇದ್ದರು . ಆದರೆ ಈಗ ಮರು ಪರಿಷ್ಕರಣೆಗೆ ರಚಿಸಿರುವುದು ಒಂದೇ ಸಮಿತಿ . ಈ ಸಮಿತಿಯು ಸಾಮಾಜಿಕ ಸಮತೋಲನದಿಂದ ಕೂಡಿಲ್ಲ .
ರೋಹಿತ್ ಚಕ್ರತೀರ್ಥ ಅವರು ಭಾಷಾಪಠ್ಯಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆ ತುರುಕಬಾರದು ಎಂದಿದ್ದಾರೆ . ಅದರಂತೆ ಸಾಮಾಜಿಕ ನ್ಯಾಯಕ್ಕೆ , ಲಿಂಗ ಸಮಾನತೆಗೆ ವಿರುದ್ಧವಾಗಿ ಮರು ಪರಿಷ್ಕರಣೆ ಮಾಡಿದ್ದಾರೆ . ಇದನ್ನು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ . ಸಂವಿಧಾನದ ಆಶಯಕ್ಕೆ ವಿರುದ್ಧವಾದ ಈ ನಡೆಯನ್ನು ದಲಿತ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತವೆ .
ಸಮಾಜ ಸುಧಾರಕರಾದ ನಾರಾಯಣ ಗುರು ಮತ್ತು ಪೆರಿಯಾರ್ ಅವರ ಪಾಠಗಳನ್ನು ಸಮಾಜವಿಜ್ಞಾನ ( ರ್ಪ ತರಗತಿ ) ಪಠ್ಯದಿಂದ ಕೈಬಿಡಲಾಗಿದೆ . ನಾರಾಯಣಗುರು ಅವರು ತಳಸಮುದಾಯಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದವರು . ಮೂಲತಃ ಕರ್ನಾಟಕದವರೇ ಆದ ಪೆರಿಯಾರ್ ಅವರು ದ್ರಾವಿಡ ಸ್ವಾಭಿಮಾನ ಚಳವಳಿ ಕಟ್ಟಿದವರು . ಪಠ್ಯದಲ್ಲಿ ಪೆರಿಯಾರ್ ಅವರ ವಿಚಾರಧಾರೆಯನ್ನು ವಿವರಿಸಲಾಗಿದೆಯೇ ಹೊರತು ಪರ ಅಥವಾ ವಿರೋಧದ ಮಾತು ಆಡಿಲ್ಲ . ವಸ್ತು ವಿಷಯ ಇದೆಯೇ ಹೊರತು ವೈಭವೀಕರಿಸಲಿಲ್ಲ .
ಈ ಇಬ್ಬರು ಸಾಮಾಜಿಕ ಸುಧಾರಕರ ಬಗ್ಗೆ ಮಾತ್ರ ಅಲ್ಲ . ಎಲ್ಲಾ ಮತ ಪ್ರವರ್ತಕರು , ಧರ್ಮ ಪಂಥಗಳ ಪಾಠಗಳೂ ಪಠ್ಯಪುಸ್ತಕದಲ್ಲಿವೆ . ಶಂಕಾರಾಚಾರ್ಯ , ಮಧ್ವಾಚಾರ್ಯ , ರಾಮಾನುಜಾಚಾರ್ಯ , ರಾಮಕೃಷ್ಣ ಪರಮಹಂಸ , ವಿವೇಕಾನಂದ ಹೀಗೆ ಎಲ್ಲರ ವಿಚಾರಧಾರೆಗಳೂ ಇವೆ . ಇವೆಲ್ಲಾ ಒಂದೇ ವಿಚಾರಧಾರೆ ಹೊಂದಿಲ್ಲ . ಎಲ್ಲಾ ವಿಚಾರಗಳನ್ನು ಒಪ್ಪಬೇಕು ಎಂದು ಹೇಳಿಲ್ಲ . ಕೇವಲ ಮಾಹಿತಿ ಅಷ್ಟೇ ಪಠ್ಯಪುಸ್ತಕಗಳಲ್ಲಿ ಇದೆ . ಆದ್ದರಿಂದ ಈ ಸಾಲಿನಲ್ಲಿ ನಾರಾಯಣಗುರು , ಪೆರಿಯಾರ್ ಸೇರಿದರೆ ತಪ್ಪೇನು ?
ರೋಹಿತ್ ಚಕ್ರತೀರ್ಥರು ನಿತ್ಯ ಬಾಯಿಗೆ ಬಂದಂತೆ ಮಾತಾಡುತ್ತಾರೆ . ಅವರು ಹೇಳಿದ್ದೇ ಸತ್ಯ ಅದೇ ಚರಿತ್ರೆ ‘ ಎಂದು ಬಿಂಬಿಸುತ್ತಾರೆ . ಇದು ಅಚ್ಚರಿಯ ವಿಷಯ ಅಲ್ಲ , ಆದರೆ ಶಿಕ್ಷಣ ಸಚಿವ ನಾಗೇಶ್ ಅವರು ಹೇಳಿರುವ ಕೆಲವು ತಪ್ಪು ಮಾಹಿತಿಗಳು ಅಚ್ಚರಿಪಡಿಸುತ್ತವೆ .
ಹಿಂದೆ ಪರಿಷ್ಕರಣೆ ಮಾಡಿದಾಗ ಸಂಗೊಳ್ಳಿ ರಾಯಣ್ಣ , ಮದಕರಿನಾಯಕ , ಕಿತ್ತೂರು ಚೆನ್ನಮ್ಮ , ರಾಣಿ ಅಬ್ಬಕ್ಕ ಬಗ್ಗೆ ಒಂದೂ ಲೈನ್ ಇಲ್ಲ ಎಂದಿದ್ದಾರೆ . ಕುವೆಂಪು , ಕೆಂಪೇಗೌಡರ ಪಾಠ ತೆಗೆಯಲಾಗಿದೆ ಎಂದೂ ಹೇಳಿದ್ದಾರೆ . ನಮ್ಮ ಮಾಹಿತಿಯಂತೆ ಈ ಎಲ್ಲರ ಬಗ್ಗೆಯೂ ಹಿಂದಿನ ಪರಿಷ್ಕರಣೆಯಲ್ಲಿ ಬೇರೆ ಬೇರೆ ತರಗತಿಯಲ್ಲಿ ಪಾಠಗಳು ಇದ್ದವು . ಇಲ್ಲ ಅನ್ನೋದಾದ್ರೆ ಮರುಪರಿಷ್ಕರಣೆಯಲ್ಲಿ ಸರಿ ಮಾಡಬಹುದಿತ್ತಲ್ಲ ? ಕೆಲವರ ಬಗ್ಗೆ ಕಡಿಮೆ ಮಾಹಿತಿ ಅನ್ನೋದಾದ್ರೆ , ಇವರೇ ಜಾಸ್ತಿ ಮಾಡಬಹುದಿತ್ತಲ್ಲ ? ಅದರ ಬದಲು ಇವರು ಸೇರಿಸಿದ ಪಾಠಗಳು ಜನವಿರೋಧಿಯಾಗಿವೆ .
ಈಗಿನ ಮರುಪರಿಷ್ಕರಣೆಯಲ್ಲಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ . ಜಾತಿವಾದಿ ಹಾಗೂ ಮೂಲಭೂತವಾದಿ ನಿಲುವು ಕಂಡುಬರುತ್ತಿದೆ . ಇದಕ್ಕೆ ಹೆಗಡೆವಾರ್ ಅವರು ರಾಷ್ಟ್ರಧ್ವಜದ ಬದಲು ಭಗವಾಧ್ವಜವನ್ನು ಗೌರವಿಸುವ ಬಗ್ಗೆ ಹೇಳಿದ ಮಾತನ್ನು ತಿದ್ದಿ ‘ ಭಗವಾ ‘ ಅನ್ನೋದನ್ನು ತೆಗೆದು ಪಾಠ ಹಾಕಿರುವುದೇ ಸಾಕ್ಷಿ . ಕೋಮುವಾದಿ ಭಾವನೆ ಬರುತ್ತದೆಯೆಂದು ತೆಗೆದಿದ್ದೇವೆ ‘ ಎಂದು ಚಕ್ರತೀರ್ಥ ಹೇಳಿದ್ದಾರೆ . ಆ ಮೂಲಕ ಕೋಮುವಾದ ಇತ್ತು ಎಂದು ಒಪ್ಪಿಕೊಂಡಿದ್ದಾರೆ . ಇದು ಸಂವಿಧಾನ ವಿರೋಧಿ . ನಾವು ಇದನ್ನು ವಿರೋಧಿಸುತ್ತೇವೆ .
ಈ ಎಲ್ಲಾ ವಿವಾದಗಳಿಂದ ಮುಕ್ತವಾಗಲು ಮರು ಪರಿಷ್ಕರಣೆ ಪಠ್ಯಗಳನ್ನು ಹಿಂದಕ್ಕೆ ಪಡೆಯಬೇಕು . ಹಿಂದಿನ ಪಠ್ಯಗಳನ್ನು ಮುಂದುವರೆಸಬೇಕು . ಇಲ್ಲದಿದ್ದರೆ ನಾವು ಈ ಸಾಮಾಜಿಕ ನ್ಯಾಯದ ವಿರೋಧಿ ಮರು ಪರಿಷ್ಕರಣೆಯ ವಿರುದ್ಧವಾಗಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಥಿಯಲ್ಲಿ ಮೋಹನ್ ರಾಜು , ಆರ್ .- ಡಿಎಸ್ಎಸ್ ( ಭೀಮವಾದ ), ಗೋಪಾಲಕೃಷ್ಣ ಹರಳಹಳ್ಳಿ – ಡಿ.ಹೆಚ್.ಎಸ್ , ಕರ್ನಾಟಕ, ರಾಜಶೇಖರ ಮೂರ್ತಿ ಡಿ.ಹೆಚ್.ಎಸ್ . ಕರ್ನಾಟಕ, ಬಸವರಾಜ ಕೌತಳ- ದಲಿತ ಮಾನವ ಹಕ್ಕುಗಳ ವಿಮೋಚನಾ ವೇದಿಕೆ, ಮಾರಪ್ಪ ಎಚ್ – ಡಿ.ಎಸ್.ಎಸ್( ಸಮತಾವಾದ) ಉಪಸ್ತಿತರಿದ್ದರು
City Today News
9341997936