ಅಕ್ರಮ ಡಿಪ್ಲೋಮಾ ಆರೋಪದ ನಡುವೆ ಜೆಇ ನೇಮಕಾತಿ; ಕಾನೂನು ಕ್ರಮಕ್ಕೆ ಒತ್ತಾಯ

ಬೆಂಗಳೂರು: ಬೆವಿಕಂನಲ್ಲಿ ಶೇಕಡ 10ರ ಇನ್-ಸರ್ವಿಸ್ ನೇರ ನೇಮಕಾತಿ ಕೋಟಾದಡಿ ಕಿರಿಯ ಅಭಿಯಂತರ (ವಿ) ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಅಥವಾ ರದ್ದುಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕೆಜಿಎಫ್ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿ ನಿಯಮಬಾಹಿರವಾಗಿ ನಿರಾಪೇಕ್ಷಣ ಪತ್ರ (NOC) ಪಡೆದು ಬೆಂಗಳೂರಿನ ನಾಡಗೀರ್ ಸಂಜೆ ಡಿಪ್ಲೋಮಾ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾರ್ಹತೆ ಪಡೆದಿದ್ದು, ಅದರ ಆಧಾರದಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಆರೋಪ ಮಾಡಲಾಗಿದೆ.

ಎಐಸಿಟಿಇ (AICTE) ನಿಯಮಗಳ ಪ್ರಕಾರ ಸೇವಾ ಸ್ಥಳ ಅಥವಾ ವಾಸಸ್ಥಳದಿಂದ 50 ಕಿ.ಮೀ. ವ್ಯಾಪ್ತಿಯೊಳಗಿನ ಶಿಕ್ಷಣ ಸಂಸ್ಥೆಯಲ್ಲೇ ವ್ಯಾಸಂಗ ಮಾಡಬೇಕು ಎನ್ನುವ ಷರತ್ತು ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ.

ಇದೇ ಕಾಲೇಜಿನ ಪರೀಕ್ಷಾ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿದ್ದು, ಈ ಸಂಬಂಧ ಸಲ್ಲಿಸಲಾದ ರಿಟ್ ಅರ್ಜಿ ಸಂಖ್ಯೆ 2352/2026 ಕೂಡ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ತನಿಖೆ ಹಾಗೂ ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಾಡಗೀರ್ ಸಂಜೆ ಕಾಲೇಜಿನ ಡಿಪ್ಲೋಮಾ ಅರ್ಹತೆಯನ್ನು ಆಧರಿಸಿ ಯಾವುದೇ ನೇಮಕಾತಿ ನಡೆಸಬಾರದು. ಅಲ್ಲದೆ, ನಿಯಮಬಾಹಿರವಾಗಿ ನಿರಾಪೇಕ್ಷಣ ಪತ್ರ ನೀಡಿದ ಅಧಿಕಾರಿಗಳು ಹಾಗೂ ಅದನ್ನು ಪಡೆದು ಪ್ರವೇಶ ಪಡೆದ ಅಭ್ಯರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

City Today News 9341997936