
ಬೆಂಗಳೂರು: ಸತತ ಮೂರು ಬಾರಿ ಗರ್ಭಪಾತ ಅನುಭವಿಸಿ, ಅಪರೂಪದ ರೋಗಗಳಿಂದ ತಾಯಿಯಾಗುವ ಕನಸನ್ನೇ ಕಳೆದುಕೊಂಡಿದ್ದ ಹಾಸನ ಮೂಲದ ಮಹಿಳೆಗೆ ಸ್ಪರ್ಶ್ ಆಸ್ಪತ್ರೆ ಯಶವಂತಪುರದ ವೈದ್ಯರು ಯಶಸ್ವಿ ಹೆರಿಗೆ ಮಾಡಿಸಿ ಹೊಸ ಭರವಸೆ ಮೂಡಿಸಿದ್ದಾರೆ. ಜನನದ ವೇಳೆ ಕೇವಲ 600 ಗ್ರಾಂ ತೂಕವಿದ್ದ ಶಿಶು, ವೈದ್ಯರ ವಿಶೇಷ ಆರೈಕೆಯಿಂದ ಇದೀಗ 1.6 ಕೆಜಿ ತೂಕಕ್ಕೆ ಬೆಳೆಯಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ವೇಳೆ ಮಹಿಳೆ ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಗಳ ವೇಳೆ ಅವರು ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ (SLE) ಹಾಗೂ ಇಮ್ಯೂನ್ ಥ್ರೋಂಬೋಸೈಟೋಪೆನಿಕ್ ಪರ್ಪುರಾ (ITP) ಎಂಬ ಸ್ವಯಂಪ್ರತಿರೋಧಕ ಕಾಯಿಲೆಗಳಿಂದ ಬಳಲುತ್ತಿರುವುದು ಪತ್ತೆಯಾಯಿತು. ಈ ಕಾಯಿಲೆಗಳ ಪರಿಣಾಮವಾಗಿ ಅವರ ರಕ್ತದಲ್ಲಿನ ಪ್ಲೇಟ್ಲೆಟ್ಗಳ ಪ್ರಮಾಣ ತೀವ್ರವಾಗಿ ಕುಸಿದಿದ್ದರಿಂದ ಗರ್ಭಧಾರಣೆ ತಾಯಿ ಹಾಗೂ ಭ್ರೂಣ ಇಬ್ಬರಿಗೂ ಜೀವಾಪಾಯಕಾರಿಯಾಗಿತ್ತು.
ಈ ಸವಾಲಿನ ಪ್ರಕರಣವನ್ನು ಪ್ರಸೂತಿ ತಜ್ಞೆ ಡಾ. ಪದ್ಮಲತಾ, ಕೀಲುರೋಗ ತಜ್ಞೆ ಡಾ. ವಿನಯಾ, ರಕ್ತತಜ್ಞ ಡಾ. ಮಹೇಶ್ ಹಾಗೂ ಭ್ರೂಣ ವೈದ್ಯಕೀಯ ತಜ್ಞೆ ಡಾ. ಲತಾ ಅವರನ್ನೊಳಗೊಂಡ ಬಹುವಿಭಾಗೀಯ ವೈದ್ಯರ ತಂಡ ಸಮಗ್ರವಾಗಿ ನಿರ್ವಹಿಸಿತು. ಗರ್ಭಧಾರಣೆಯ 17ನೇ ವಾರದಲ್ಲಿ ನಡೆಸಿದ ಆಮ್ನಿಯೋಸೆಂಟೆಸಿಸ್ ಪರೀಕ್ಷೆಯಲ್ಲಿ ಭ್ರೂಣದ ವರ್ಣತಂತುಗಳಲ್ಲಿ ಯಾವುದೇ ಅಸಾಮಾನ್ಯತೆ ಇಲ್ಲ ಎಂಬುದು ದೃಢಪಟ್ಟಿತು.
ಆದರೆ 25ನೇ ವಾರದ ಸ್ಕ್ಯಾನ್ನಲ್ಲಿ ಭ್ರೂಣದಲ್ಲಿ ತೀವ್ರ ರಕ್ತಹೀನತೆ ಮತ್ತು ಹೃದಯ ವೈಫಲ್ಯದ ಲಕ್ಷಣಗಳು ಕಂಡುಬಂದವು. ಇದನ್ನು ಗಮನಿಸಿದ ವೈದ್ಯರು ಗರ್ಭದಲ್ಲೇ ಮಗುವಿಗೆ ಇಂಟ್ರಾ ಯುಟರೈನ್ ಬ್ಲಡ್ ಟ್ರಾನ್ಸ್ಫ್ಯೂಷನ್ ಮೂಲಕ ರಕ್ತ ವರ್ಗಾವಣೆ ನಡೆಸಿದರು. ನಂತರ ತಾಯಿಯ ಪ್ಲೇಟ್ಲೆಟ್ ಪ್ರಮಾಣವನ್ನು ಸ್ಥಿರವಾಗಿಡಲು ಐವಿಐಜಿ (IVIG) ಚಿಕಿತ್ಸೆ ನೀಡಲಾಯಿತು. ಏಳನೇ ತಿಂಗಳಲ್ಲಿ ಮತ್ತೊಮ್ಮೆ ಭ್ರೂಣಕ್ಕೆ ರಕ್ತ ವರ್ಗಾವಣೆ ಮಾಡಲಾಯಿತು.
“ಇದು ಅತ್ಯಂತ ಸಂಕೀರ್ಣ ಮತ್ತು ಅಪಾಯಕಾರಿಯಾದ ಪ್ರಕರಣವಾಗಿತ್ತು. ಸತತ ಗರ್ಭಪಾತಗಳಿಂದ ಮಾನಸಿಕವಾಗಿ ಕುಗ್ಗಿದ್ದ ತಾಯಿಗೆ ಆತ್ಮವಿಶ್ವಾಸ ತುಂಬುವುದು ಕೂಡ ಚಿಕಿತ್ಸೆಯಷ್ಟೇ ಮುಖ್ಯವಾಗಿತ್ತು. ವಿವಿಧ ತಜ್ಞರ ಸಮನ್ವಯದ ಆರೈಕೆಯಿಂದ 34 ವಾರಗಳ ಗರ್ಭಾವಧಿಯವರೆಗೆ ಸುರಕ್ಷಿತವಾಗಿ ಗರ್ಭಧಾರಣೆಯನ್ನು ಮುಂದುವರಿಸಲು ಸಾಧ್ಯವಾಯಿತು,” ಎಂದು ಡಾ. ಪದ್ಮಲತಾ ತಿಳಿಸಿದರು.
ಹೆರಿಗೆಯ ಬಳಿಕ ನವಜಾತ ಶಿಶು ತಜ್ಞ ಡಾ. ಅರುಣ್ ಅವರ ನೇತೃತ್ವದಲ್ಲಿ ಶಿಶುವಿಗೆ ಎನ್ಐಸಿಯುವಿನಲ್ಲಿ ವಿಶೇಷ ಆರೈಕೆ ನೀಡಲಾಯಿತು. ನಿರಂತರ ಚಿಕಿತ್ಸೆಯ ಫಲವಾಗಿ ಶಿಶು ಆರೋಗ್ಯಕರ ಬೆಳವಣಿಗೆ ಸಾಧಿಸಿದ್ದು, ತಾಯಿ ಮತ್ತು ಮಗು ಇಬ್ಬರೂ ಸುಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
City Today News 9341997936

You must be logged in to post a comment.